Saturday, May 9, 2009

ನಿಮ್ಗೆ ಗೊತ್ತಾ?

ಒಂದಾನೊಂದು ಕಾಲದಲ್ಲಿ
ಒಬ್ಬ ರಾಜ ಇದ್ದನು
...........
..........
............
...........
.............
............
ಈಗ ಇಲ್ಲ!

ಏನೂ ಇಲ್ಲ!

ಹಿಂದೊಬ್ಬ
...
...
...
...
...
ಅವನ
ಮುಂದೊಬ್ಬ!

Friday, May 1, 2009

ಸಂಮಾನ ಅಭಿನಂದನೆ ಬೇಡ ಅಂದಾಗ.




ಚುನಾವಣೆ ಮುಗಿದು ಸಂಸದರ ಫಲಿತಾಂಶ ಬರುವ ಕಾಲವೂ ಬಂದಿದೆ.
ಒಬ್ಬ ಗೆದ್ದರೆ ಉಳಿದವರು ಸೋಲುವುದು ಸಹಜ. ಆಮೇಲೆ ಸೋತ ಅನೇಕರು ಕಾಣೆ ಯಾಗುವುದು, ಗೆದ್ದವರು ಸಭೆ ಸಮಾರಂಭ ಗಳಲ್ಲಿ ಮಿಂಚು ವುದು, ನಾನು ನಿಮ್ಮವನೇ, ನಿಮ್ಮ ಕೆಲಸ ಮಾಡುತ್ತೇನೆ ಅಂತೆಲ್ಲ ಭರವಸೆ ಕೊಡುವುದು ಎಲ್ಲ ಮಾಮೂಲು.
ಗೆದ್ದೆತ್ತಿನ ಬಾಲದಂತೆ ಒಂದಷ್ಟು ಮಂದಿ ತಮ್ಮ ಕೆಲಸ ಮಾಡಿಸಿಕೊಳ್ಳಲು, ಗೆದ್ದ ಶಾಸಕ, ಸಂಸದ, ಮಂತ್ರಿಯಂತಹ ಅಧಿಕಾರಸ್ಥನನ್ನು ಖುಷಿಗೊಳಿಸಲು ಸಭೆ ಸಮಾರಂಭ ಆಯೋಜಿಸಿ ಸಂಮಾನಿಸುವುದು ಕೂಡ ಹೊಸದಲ್ಲ.
ಸಾವಿರ ಸಂಖ್ಯೆಯಲ್ಲಿ ಜನ ಸೇರಿಸಿ, ಕೆಜಿ ಗಟ್ಟಲೆ ತೂಕದ ಹೂಹಾರ ಹಾಕಿ, ಮೀಟರ್ ಗಟ್ಟಲೆ ಉದ್ದಕ್ಕೆ ಬಿಡಿಸಿಟ್ಟ ಪಟಾಕಿ ಸುಟ್ಟು, ಬೆಳ್ಳಿ ಬಂಗಾರದ ಕಿರೀಟ ತೊಡಿಸಿ, ಖಡ್ಗ ಕೊಟ್ಟು ಜೈಕಾರ ಕೂಗಿ ಪುನೀತರಾಗುವ ಅಭಿಮಾನಿಗಳಿಗೇನೂ ಕೊರತೆಯಿರುವುದಿಲ್ಲ.
ಆದರೆ ಎಚ್ಚರಿಕೆಯಿಂದ ಇರಬೇಕಾದವನು ಗೆದ್ದ ಶಾಸಕ ಅಥವಾ ಸಂಸದ. ಈ ಎಲ್ಲ ಅಭಿಮಾನದ ಸಂಮಾನಗಳನ್ನು ಸ್ವೀಕರಿಸುವುದ ಕ್ಕಿಂತ ಅದಕ್ಕಾಗಿ ಮಾಡುವ ಸಾವಿರ, ಲಕ್ಷಾಂತರ ದುಡ್ಡನ್ನು ವ್ಯರ್ಥಗೊಳಿಸುವುದಕ್ಕಿಂತ ಆ ಹಣವನ್ನು ಒಳಿತು ಕಾರ್‍ಯಕ್ಕೆ ಬಳಸುವಂತೆ ತನ್ನ ಅಭಿಮಾನಿಗಳನ್ನು ಹುರಿದುಂಬಿಸುವುದು ಉತ್ತಮ.
ಒಬ್ಬ ಸಂಸದ ಗೆದ್ದ ಮೇಲೆ ಸುಮಾರು ಇನ್ನೂರೈವತ್ತು ಸಂಮಾನಗಳನ್ನು ಸ್ವೀಕರಿಸುತ್ತಾನೆ ಅಂತ ಲೆಕ್ಕ ಇಟ್ಟುಕೊಂಡರೆ; ಅವುಗಳಲ್ಲಿ ಐವತ್ತು ಸಾವಿರ ರುಪಾಯಿ ವೆಚ್ಚದ ಹತ್ತು, ೨೫ಸಾವಿರ ರೂ. ಖರ್ಚಿನ ನಲವತ್ತು, ಹತ್ತು ಸಾವಿರ ರೂ. ಖರ್ಚಿನ ನೂರು, ಐದು ಸಾವಿರ ರೂ. ವೆಚ್ಚದ ನೂರು ಸಂಮಾನ, ಅಭಿನಂದನೆ ಕಾರ್‍ಯಕ್ರಮಗಳು ಎಂದು ಇಟ್ಟುಕೊಂಡರೆ ಆಗುವ ಮೊತ್ತವೆಷ್ಟು ಗೊತ್ತೇ? ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿ! ಇನ್ನು ೫ಸಾವಿರ ರೂಪಾಯಿಗಳಿಗಿಂತ ಕಡಿಮೆಯದ್ದು ಲೆಕ್ಕ ಮಾಡಿಲ್ಲ ಬಿಡಿ.
ಇದೇ ಹಣದಲ್ಲಿ ಬಡವರಿಗೆ ನೂರು ಮನೆ ಗಳನ್ನು ಕಟ್ಟಿಸಬಹುದು. ಒಂದು ಹೊಳೆಗೆ ಸೇತುವೆ ಕಟ್ಟಿಸಬಹುದು. ಒಂದು ಹಳ್ಳಿಗೆ ರಸ್ತೆ ಮಾಡಬಹುದು. ಒಂದು ಸಾವಿರ ಮನೆಗಳಿಗೆ ಕರೆಂಟು ಕೊಡಿಸಬಹುದು. ಮೂರು ಸಾವಿರ ಬಡ ಮಕ್ಕಳ ಶಾಲಾ ಫೀಸು ಕೊಡಿಸಬಹುದು. ಸಾವಿರಾರು ಮಂದಿಯ ಆಸ್ಪತ್ರೆಯ, ಔಷಧಿಯ ಖರ್ಚು ಕೊಡಬಹುದು....ಇದೆಲ್ಲವೂ ಸಾಧ್ಯವಾಗುವುದು ಕೇವಲ ಸಂಮಾನ ಅಭಿನಂದನೆ ಸಮಾರಂಭ ಬೇಡ ಅಂದಾಗ.
ಕೆಲವರು ವಾದಿಸಬಹುದು; ಕಾರ್‍ಯಕರ್ತರಿಗೆ, ಅಭಿಮಾನಿಗಳಿಗೆ ಸಂಮಾನ ಬೇಡ ಅಂದರೆ ಬೇಸರವಾಗಬಹುದು ಎಂದು. ಆದರೆ ನಾನೆಲ್ಲೂ ಸಂಮಾನ ಸ್ವೀಕರಿಸುವುದಿಲ್ಲ. ನೀವು ಗೆಲ್ಲಿಸಿರುವುದೇ ನನಗೆ ನೀಡಿದ ಬಹುದೊಡ್ಡ ಸಂಮಾನ. ಸಿಕ್ಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ಬೇಕಾದರೆ ಸಂಮಾನಿಸಿ ಅಂತ ವಿನಯತೆಯಿಂದ, ಖಡಾ ಖಂಡಿತವಾಗಿ ಹೇಳಿದಾಗ ಎಂಥಾ ಅಭಿಮಾನಿ ಯೂ ಒಪ್ಪಿಕೊಂಡೇಕೊಳ್ಳುತ್ತಾನೆ. ಒಂದು ವೇಳೆ ಆಮೇಲೂ ಸಂಮಾನಿಸಿದರೆ ಅದು ಪ್ರೀತಿಯ ಅಭಿನಂದನೆ ಅಲ್ಲವೇ ಅಲ್ಲ, ಕೇವಲ ಸ್ವಾರ್ಥದ್ದು ಎಂದು ಬೇರೆ ವಿವರಿಸಿ ಹೇಳಬೇಕಿಲ್ಲ.
ಮೊದಲು ಸಮಸ್ಯೆಗಳ ಅಧ್ಯಯನ, ಯೋಜನೆಗಳ ಅನುಷ್ಟಾನ, ಕೆಲಸ, ಸಮಸ್ಯೆಗಳ ಪರಿಹಾರ, ಸಾಧನೆಗಳೆಲ್ಲ ಆದ ಮೇಲೆ ಜನ ಮತ್ತೆ ಹರಸುವ, ಸಂಮಾನಿಸುವ ಕಾರ್‍ಯ ಮಾಡೇ ಮಾಡುತ್ತಾರೆ.

Saturday, April 4, 2009

ನವರಸಗಳು








































ನವರಸಗಳ ಚಿತ್ರ
ನಿಮಗಿಷ್ಟವಾದೀತೆಂದು...





Wednesday, April 1, 2009

ಜಾತ್ರೆ





ಆಚಾರ್ಯ ತಪಸಾಮ್ನಾಯ ಜಪೇನ
ನಿಯಮೇನ ಚ ಉತ್ಸವೇನಾನ್ನ ದಾನೇನ ಕ್ಷೇತ್ರ ವೃದ್ಧಿಸ್ತು ಪಂಚಧಾ
ದೇವಳದಲ್ಲಿ ಪ್ರತಿಷ್ಟೆ ಮಾಡಿದ ತಂತ್ರಿ, ಅರ್ಚಕರ ತಪೋಬಲದಿಂದ ವೇದಪಾರಾಯಣದಿಂದ, ನಿಯಮ ನಿಬಂಧನೆಗಳಿಂದ(ಸಂಪ್ರದಾಯ ಪಾಲನೆಯಿಂದ) ಉತ್ಸವ ಅನ್ನದಾನದಿಂದ ಈ ಐದು ಪ್ರಕಾರಗಳಿಂದ ಕ್ಷೇತ್ರ ವೃದ್ಧಿಯಾಗುತ್ತದೆ.ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಉತ್ಸವವೆನ್ನುವುದು ಅನಿವಾರ್ಯ. ಉತ್ಸವ ಅಥವಾ ಕನ್ನಡದ ಜಾತ್ರೆ ಯಾವ ರೀತಿಯಲ್ಲೂ ಮಾಡಬಹುದು.ಕೆಲವೆಡೆ ವಾರ್ಷಿಕ ದಿನವಾಗಿ, ಇನ್ನು ಕೆಲವೆಡೆ ಧ್ವಜಾರೋಹಣಗೈದು ಮೂರು, ಐದು, ಹತ್ತು ದಿನಗಳ ಕಾಲ, ಇನ್ನು ಕೆಲವೆಡೆ ಭಜನೆಗಳ ಮೂಲಕ ಉತ್ಸವ ನಡೆಸುತ್ತಾರೆ.
ಪ್ರತಿಷ್ಟಾ ವರ್ಧಂತಿ ರೂಪ ದಲ್ಲೂ ಉತ್ಸವ ಆಚರಣೆಯಾಗುತ್ತದೆ.ಉತ್ ಸವ ಎಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ. ಧ್ವಜವೆಂದರೆ ಚಿಹ್ನೆ. ಆಯಾ ದೇವರ ವಾಹನದ ಚಿತ್ರವಿರುವ ಮೇಲಕ್ಕೇರಿಸಿ, ಧ್ವಜಾರೋಹಣದ ಮೂಲಕ ಇಡೀ ಜಗತ್ತಿಗೆ ಉತ್ಸವವನ್ನು ಸಾರುವ ಸೂಚನೆ. ಕೆಳಗಿನ ಲೋಕಗಳಾದ ಅತಲ, ವಿತಲ. ಸುತಲ, ನಿತಲ, ತಲಾತಲ, ರಸಾತಲ, ಪಾತಾಲ ಹಾಗೂ ಮೇಲಿನ ಭೂಃ, ಭುವ, ಸ್ವ, ಮಹಾ, ಜನಃ, ಸತ್ಯ ಲೋಕಗಳು ಅಂದರೆ ಹದಿನಾಲ್ಕು ಲೋಕಗಳ ದೇವತೆಗಳು ರಥಾರೋಹಣದ ಕಾಲದಲ್ಲಿ ದೇವ ರನ್ನು ನೋಡುತ್ತಾರೆ. ಅಷ್ಟೆಲ್ಲ ದೇವತೆಗಳ ಶಕ್ತಿಯಿರುವ ರಥವನ್ನು ಎಳೆಯುವುದು ಪುಣ್ಯದ ಕೆಲಸ. ರಥಾರೋಹಣ ನೋಡಿದರೆ ಪುನರ್ ಜನ್ಮವಿಲ್ಲ ಎಂಬ ನಂಬಿಕೆ, ಕಲ್ಪನೆಯಿದೆ.ಆ ಕಾರಣಕ್ಕಾಗಿ ಜಾತ್ರೆ ಸಂದರ್ಭ ಜನ ಸೇರುತ್ತಾರೆ. ಪರಿಣಾಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ.ನಮ್ಮ ಒಂದು ವರ್ಷ ದೇವರಿಗೆ ಒಂದು ದಿನ. ಪ್ರತಿ ವರ್ಷ ನಡೆಯುವ ಜಾತ್ರೆ ಅಂದರೆ ದೇವರಿಗೆ ಪ್ರತಿ ದಿನವೂ ಉತ್ಸವವೇ.ರಥವನ್ನು ಕಟ್ಟುವ ಕಾಯಕವೂ ಆ ಊರಿನ ಕೆಲ ಮನೆಯವರ ಪಾಲಿಗೆ ಸೇವೆ, ಕರ್ತವ್ಯ.ಪತಾಕೆ, ಸಿಂಹ, ಆನೆ, ಗರುಡ ಮುಂತಾದ ಕೆತ್ತನೆಗಳನ್ನು ಕಟ್ಟಿ ಸಿಂಗರಿಸುವ ಚೆಂದವೇ ಬೇರೆ.ರಥಗಳಲ್ಲೂ ಚಂದ್ರ ಮಂಡಲ, ಚಿಕ್ಕ ರಥ, ಬ್ರಹ್ಮ ರಥ, ಬೆಳ್ಳಿಯ ರಥ, ಚಿನ್ನದ ರಥ ಹೀಗೆ ವಿವಿಧ ವಿಧಗಳು. ರಥದಲ್ಲಿ ದೇವರನ್ನು ಗೋವಿಂದಾ ಅನ್ನಿ ಗೋವಿಂದ ಎಂದು ಕೂಗುತ್ತ ಎಳೆದು ಪುನೀತರಾಗಲು ನೂರಾರು ಮಂದಿ ಸೇರುತ್ತಾರೆ. ಹಾಗೆ ರಥ ಎಳೆಯುವುದನ್ನು ಕೈಮುಗಿದು ನೋಡಲು ಸಾವಿರಾರು ಮಂದಿ ಸೇರುತ್ತಾರೆ. ಪ್ರಸಿದ್ಧ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಲಕ್ಷದ ಲೆಕ್ಕದಲ್ಲಿರುತ್ತದೆ. ದೇವರನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ಸಂಭ್ರಮಿ ಸುವ ಜೊತೆಗೆ, ಆಯಾ ದೇಗುಲದ ಪರಿಸರದ ಊರುಗಳಿಗೂ ದೇವರನ್ನು ಸವಾರಿ ತರಲಾಗುತ್ತದೆ. ಇವತ್ತು ನಮ್ಮ ಊರಿಗೆ ದೇವರು ಬರುತ್ತಾರೆ ಅಂತ ಆಯಾ ಹಾದಿಗಳ ಮಂದಿ ಕಟ್ಟೆಗಳನ್ನು ನಿರ್ಮಿಸಿ, ಸಿಂಗರಿಸಿ ಪೂಜೆಗೆ ಅನುವು ಮಾಡಿಕೊಂಡಿರುತ್ತಾರೆ.ದೇಗುಲದ ಪಕ್ಕದಲ್ಲಿ ಒಬ್ಬನಿಗಂತೂ ಗರ್ನಲು ಬಿಡುವುದೇ ಕೆಲಸ. ವಾದ್ಯ, ಚೆಂಡೆ, ಡೋಲು ಬಡಿಯುವ ಕಾಯಕದ ತುಂಬ ಜನ ಸೇರುವುದೇ ಜಾತ್ರೆಯಲ್ಲಿ. ಜಾತ್ರೆ ಆ ಊರಿಗೆ ಹಬ್ಬದಂತೆ. ಪ್ರತಿ ಮನೆಗೂ ಸಂಭ್ರಮ. ನೆಂಟರು, ಅತಿಥಿಗಳು ಬರುತ್ತಾರೆ. ಮನೆ ಮಂದಿ ದೂರದೂರುಗಳಿಂದ ಬರುತ್ತಾರೆ. ಬಂಧುಗಳೆಲ್ಲ ಒಂದಾಗಲು ಮದುವೆಯಂತಹ ಶುಭ ಸಮಾರಂಭ ಬಿಟ್ಟರೆ ಉತ್ಸವದಂತಹ ಧಾರ್ಮಿಕ ನಂಬಿಕೆಯೇ ಒಂದು ನೆಪ. ಜಾತ್ರೆಗೆ ಬಟ್ಟೆ ಖರೀದಿ ಸುವುದು, ಜಾತ್ರೆಯ ಸಂತೆಯಲ್ಲಿ ವಸ್ತುಗಳನ್ನು ಕೊಳ್ಳುವುದು, ಊರವರೆಲ್ಲ ಸಿಗುವುದು ಇಂತಹ ಅನನ್ಯ ಅನುಭವಗಳು ಅನೇಕ. .ಅಂದಹಾಗೆ ಜಾನುವಾರು ಜಾತ್ರೆ, ಕೋಣಗಳ ಜಾತ್ರೆ ಅಂದರೆ ಅದು ಬೇರೆಯದೇ ಸ್ವರೂಪ!

Monday, March 16, 2009

ಹಣೆಬರಹ

ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ.ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು; 'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'

ಬೈಕೊಳು ಹಾವೇ...


ಒಬ್ಬ ನಮ್ಮೂರ ಪೇಟೆಗೆ ಅರ್ಜೆಂಟಾಗಿ ಯಾವುದೋ ವಸ್ತುವೊಂದನ್ನು ಖರೀದಿಸಲು ಒಬ್ಬ ಎಂ 80 ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಹಾಗೇ ಒಂದ್ಕಡೆ ಗಾಡಿ ನಿಲ್ಲಿಸಿ, ಅಂಗಡಿ ಒಳಗೆ ಹೋಗಿ ತನಗೆ ಬೇಕಾದ ವಸ್ತುವನ್ನು ಖರೀದಿಸಿ, ವಾಪಾಸು ಬಂದು ಗಾಡಿ ಹತ್ತಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದವನೊಬ್ಬ ಹೇಳಿದ.

ಇದು ನಿಮ್ಮ ಗಾಡಿಯಾ? ಮಾರಾಯಾ... ಇದರೊಳಗೆ ಹಾವೊಂದು ಹೋದದ್ದನ್ನು ನಾನು ನೋಡಿದೆ. ಅದು ಸರ್ಪವೇ ಇರಬೇಕು!ಅರ್ಜೆಂಟಿಗೆಂದು ಬಂದು ಹೋಗಬೇಕಾಗಿದ್ದ ಅಸಾಮಿಗೆ ವಿನಾಕಾರಣ ರಗಳೆ ತಗುಲಿಕೊಂಡಾಯಿತು! ಶ್ಶೆ ಏನೀಗ ಮಾಡೂಡು? ಎಂದು ತಲೆ ಬಿಸಿ ಮಾಡಿಕೊಂಡು ಚಡಪಡಿಸತೊಡಗಿದಾಗ ಹಾವು ಗಾಡಿಯೊಳಗೆ ಹೋದದ್ದನ್ನು ನೋಡಿದಾತ ಕೈಮುಗಿದು ಪ್ರಾರ್ಥಿಸುವ ಎಂದು ಸಲಹೆ ನೀಡಿದ. ಬೈಕು ಸವಾರ ಕೈಮುಗಿದು ಪ್ರಾರ್ಥಿಸಿದ; ಸ್ವಾಮಿ ಸರ್ಪ ದೇವ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಿನಗೆ ತಂಬಿಲ ಸೇವೆ ಕೊಡುತ್ತೇನೆ. ಒಮ್ಮೆ ಹೊರಗೆ ಬಾ ನಾಗಾ...ಊಹು, ಹಾವು ಹೊರಗೆ ಬರಲಿಲ್ಲ. ವಿಷಯ ಆಚೀಚೆ ಹೋಗುವವರಿಗೆ ಗೊತ್ತಾಗಿ ಬೈಕಿನ ಸುತ್ತ ಜನ ಸೇರತೊಡಗಿದರು. ಒಬ್ಬ ಅಂದ; ಅರಸಿನ ನೀರು ಹಾಕಿ, ಹಾವು ಹೊರಬರುತ್ತದೆ; ಒಂದು ಬಟ್ಟಲಲ್ಲಿ ನೀರು ಹಾಕಿ, ಅದಕ್ಕೆ ಅರಸಿನ ಹುಡಿ ಹಾಕಿ, ಆ ಹಳದಿ ನೀರನ್ನು ಗಾಡಿಯ ಸುತ್ತಲೂ ಚಿಮುಕಿಸಿ, ಕೈಮುಗಿದು ನಿಂತರೂ ಹಾವು ಹೊರಬರಲೊಲ್ಲದು.ಗಾಡಿಯನ್ನು ಅಡ್ಡ ಮಲಗಿಸಿ, ಹೋದರೆ ಹೋದೀತು ಅಂದದ್ದಕ್ಕೆ ಹಾಗೇ ಮಾಡಲಾಯಿತು. ಅಷ್ಟಾಗುವಾಗ ಮತ್ತಷ್ಟು ಜನ ಸೇರಿದರು. ವಾಹನಗಳಲ್ಲಿ ಹೋಗುತ್ತಿದ್ದವರು ಗಾಡಿ ನಿಲ್ಲಿಸಿ, ಅಡ್ಡ ಮಲಗಿಸಿದ ಎಂ80ಯನ್ನು ನೋಡಿ ಸಾವಿರ ಪ್ರಶ್ನೆ ಕೇಳಿ,ಹೋಗುವ ಹೊತ್ತಿಗೆ ರಸ್ತೆ ಬ್ಲಾಕ್ ಆಗಿ ಜೀಪಿನಲ್ಲಿ ಪೋಲೀಸರು ಬಂದರು.

ಜನ ಸೇರಿದ್ದನ್ನು ನೋಡಿ ಗುಂಪಿನೊಳಗೆ ನುಗ್ಗಿ ಏನು ಏನು ಎಂದು ವಿಚಾರಿಸಿದರು. ಬೈಕು ಅಡ್ಡ ಬಿದ್ದದ್ದನ್ನು ನೋಡಿ ಏನು? ಆಕ್ಸಿಡೆಂಟಾ? ಪೆಟ್ಟಾಗಿದಾ? ಅಂತ ಕೇಳುವಾಗ ಬೈಕಿನ ಓನರು; ಹಾವು, ಬೈಕಿನೊಳಗೆ ಹೋಗಿದೆ. ಹೊರಬರಲಿ ಅಂತ ಅಡ್ಡ ಮಲಗಿಸಿದ್ದೇವೆ ಅಂದ.ಸರಿ ಸರಿ, ಹೀಗೆ ದಾರಿ ಮಧ್ಯೆ ಮಲಗಿಸಬೇಡಿ. ರಸ್ತೆ ಬ್ಲಾಕ್ ಮಾಡಬೇಡಿ. ಹೋಗಿ, ಎಲ್ಲ ದೂರ ಹೋಗಿ ಅಂತ ಜನರನ್ನು ಪೋಲೀಸರು ಚದುರಿಸಿದರು.ಬೈಕನ್ನು ಇಬ್ಬರು ಹೆದರುತ್ತಲೇ ಎತ್ತಿಕೊಂಡು ರಸ್ತೆಯಾಚೆಗಿನ ಸ್ವಲ್ಪ ವಿಶಾಲ ಜಾಗಕ್ಕೆ ಕೊಂಡೊಯ್ದು ಮಲಗಿಸಿದರು. ಆದರೂ ಹಾವು ಹೊರಬರಲಿಲ್ಲ.

ಅಷ್ಟಾಗುವಾಗ ಒಬ್ಬ ಧೈರ್ಯಶಾಲಿ ಮೆಕಾನಿಕ್ ಎಂ80ಯನ್ನು ಬಿಚ್ಚತೊಡಗಿದ. ಹಿಂಬದಿಯ ಪ್ಲೇಟ್ ಬಿಚ್ಚುವ ಹೊತ್ತಿಗೆ ಒಳಗಿದ್ದ ಸಣ್ಣದಾದ ನಾಗರ ಹಾವು ಮತ್ತೂ ಒಳಕ್ಕೆ ಹೋಯಿತು. ಮೆಕಾನಿಕ್ ಬಿಚ್ಚುತ್ತ ಬಿಚ್ಚುತ್ತ ಹೋದಂತೆ ಹಾವು ಹಾಂಡಲ್ ಒಳ ತನಕ ಬಂದು ಕೂತಿತು.
ಮೆಲ್ಲ ಮಾರಾಯಾ ಗಾಡಿ ತಿರುಗಿಸಬೇಡ. ಮೊನ್ನೆ ಹೀಗೇ ಒಬ್ಬನ ಬೈಕಿನ ಒಳಗೆ ನಾಗರಹಾವು ಹೋಗಿ ಕೂತಿತ್ತು. ಆತ ಬೈಕ್ ಸ್ಟಾರ್ಟ್ ಮಾಡಿದ.ಚೈನಿನೊಳಗೆ ಸಿಕ್ಕಿ ಹಾವು ಸತ್ತೇ ಹೋಯಿತು.ಮರುದಿನ ಆತನ ಬೈಕ್ ಆಕ್ಸಿಡೆಂಟಾಗಿ ಕೆಎಂಸಿ ಆಸ್ಪತ್ರೆಯಲ್ಲಿದ್ದಾನೆ ಗೊತ್ತುಂಟಲ್ಲಾ....ಹಿರಿಯನೊಬ್ಬ ಮೆಕಾನಿಕ್ನಿಗೆ ಬುದ್ದಿವಾದ ಹೇಳಿದ. ಎಂ80ಯ ನಿಜವಾದ ಮಾಲಿಕ ಪಾಪ ಹೆದರುತ್ತ, ನಾಗದೇವರಿಗೆ ವಿವಿಧ ಹರಕೆಗಳನ್ನು ಹೇಳುತ್ತ ನಡುಗುತ್ತ ನಿಂತಿದ್ದ.ಸುತ್ತಲೂ ನೂರಾರು ಮಂದಿ ಕುತೂಹಲಿಗರು!ಎಡಕ್ಕೆ ಮಲಗಿಸಿ ಇಟ್ಟಿದ್ದ ಗಾಡಿಯನ್ನು ಈಗ ಬಲಕ್ಕೆ ಮಲಗಿಸಿ ಇಡಲಾಯಿತು. ಗಾಡಿಯನ್ನು ಸಾಧ್ಯವಾದಷ್ಟು ಬಿಚ್ಚಿದ್ದರೂ, ಹಾವು ಹ್ಯಾಂಡಲಿನ ಒಳಗೆ ಹೋಗಿ ಕೂತಿತ್ತು.ಬಾಲ ಮಾತ್ರ ಕಾಣುತ್ತಿತ್ತು.ಅಂತೂ ಇಂತೂ ಸುಮಾರು ನಾಲ್ಕೈದು ಗಂಟೆ ಕಳೆಯುವ ಹೊತ್ತಿಗೆ ಬಿಸಿಲೂ ಏರಿ, ಎಂ80 ಕೂಡ ಬಿಸಿಯಾಗಿ ಹಾವು ಮೆಲ್ಲನೆ ಹೊರ ಬಂದು ನಿಧಾನವಾಗಿ ಚರಂಡಿಯೊಳಗಿನ ಮಾಟೆ ಸೇರುವ ಹೊತ್ತಿಗೆ ಮಾಲಿಕನಿಗೆ ಅಯ್ಯಮ್ಮ ಅನಿಸಿತ್ತು.ಇದೇ ಹಾವು ಎರಡು ದಿನಗಳ ಹಿಂದೆ ಅಲ್ಲೇ ಪಕ್ಕದ ಹೊಟೇಲೊಂದರಲ್ಲಿ ಕಾಣಿಸಿಕೊಂಡಿತ್ತು.ಒಬ್ಬರು ಚಾ ಕುಡಿಯುತ್ತಿರಬೇಕಾದರೆ ಮತ್ತೊಬ್ಬರು, ಇಲ್ಲೊಂದು ಹಾವು ಹೋದ ಹಾಗೆ ಆಯಿತು ಅಂದರು. ಅಷ್ಟಾಗುವಾಗ ಚಾ ಕುಡಿಯುತ್ತಿದ್ದವರು, ಹೌದಾ, ಇನ್ನು ನನ್ನ ಚೀಲದೊಳಗೆ ಹೋಗುವುದು ಬೇಡ ಎಂದು ಚೀಲವನ್ನೆತ್ತಿ ಟೇಬಲಿನ ಮೇಲಿಟ್ಟು, ಲೋಟವನ್ನು ತುಟಿಗೆ ಹಿಡಿದು ಚಾ ಹೀರಬೇಕು ಎನ್ನುವಷ್ಟರಲ್ಲಿ ಚೀಲದೊಳಗಿಂದ ಅದೇ ಹಾವು ಹೆಡೆಯೆತ್ತಿ ಹೊರ ನೋಡಬೇಕಾ?...ಇವತ್ತಿಗೂ ಈ ಹೊಟೇಲಿನ ಆಸುಪಾಸಿನಲ್ಲಿ ಹಾವು ಬಂದು ಹೋಗುತ್ತಲೇ ಇರುತ್ತದೆ. ನಮಗೆಲ್ಲ ಇಂತಹ ಕಥೆಗಳು ಸಿಕ್ಕುತ್ತಲೇ ಇರುತ್ತವೆ.ಅಂದ ಹಾಗೆ ಇದು ಕಾಲ್ಪನಿಕ ಕಥೆಯಲ್ಲ.