Saturday, December 13, 2008

ಪಿಸ್ತೂಲು ಕಥೆ

ಸುಖಾನಂದನ ನುಡಿ ನಮನ ಬರೆದ ಬಳಿಕ ಬಂದ ಪ್ರತಿಕ್ರಿಯೆ ನೋಡಿ ಆತನದ್ದೇ ಕೆಲ ಕಥೆ ಕುಟ್ಟುವ ಅಂತ ಮನಸ್ಸಾಗಿದೆ.
ಜಿಲ್ಲಾ ಪಂಚಾಯತ್ ಚುನಾವಣೆಯ ಬ್ಯುಸಿ. ಮತದಾನದಂದು ಬೂತುಗಳಲ್ಲಿ ಕೂತುಕೊಳ್ಳುವ ಕಾರ್ಯಕರ್ತರ ಗುರುತು ಪತ್ರ ತರಲಿಕ್ಕೆಂದು ಸುಖಾನಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಹೋದ. ಆತನೊಂದಿಗೆ ಗೆಳೆಯರಾದ ದೇವದಾಸ್ ಮುಂತಾದವರಿದ್ದರು. ಸುಖಾನಂದನಿದ್ದಲ್ಲಿ ನಾನೂ ಇರುವುದು ಸಾಮಾನ್ಯವಾದುದರಿಂದ ಮಂಗಳೂರಿನಲ್ಲಿ ಜೊತೆಗೆ ಊಟ ಮಾಡೋಣ ಅಂತ ಆತನನ್ನು ಕಾಯುತ್ತ ಕೂತಿದ್ದೆ.
ಆತ ತನ್ನ ಕ್ವಾಲಿಸ್ ಕಾರಿನಲ್ಲಿ ತನ್ನ ಗ್ಯಾಂಗ್(?)ನೊಂದಿಗೆ ಬಂದು ನಾನೂ ಸೇರಿದಂತೆ ಎಲ್ಲರೂ ಜೊತೆಯಾಗಿ ಊಟ ಮಾಡಿದ್ದೂ ಆಯಿತು. ಅಲ್ಲಿಗೇ ಬಂದ ಸದಾನಂದ ಗೌಡ್ರು, ಶೋಭಕ್ಕ, ಯೋಗೀಶ್ ಭಟ್ ಎಲ್ಲ ಬಿಜೆಪಿಯ ಮುಖಂಡರೂ ವಿಶ್ ಮಾಡಿ ಹೋದ್ರು. ಆದರೆ ಸುಖಾನಂದ ಸೇರಿದಂತೆ ಎಲ್ಲರೂ ಚಡಪಡಿಸತೊಡಗಿದ್ದರು.
ಏನು ಅಂತ ಕೇಳಿದೆ ಕೊನೆಗೆ ಗೊತ್ತಾದದ್ದು: ಹಿಂದೂ ಜಾಗರಣ ವೇದಿಕೆಯವರು ಮುಲ್ಕಿಯಲ್ಲಿ ದೀಪಾವಳಿಗೆ ಪಟಾಕಿ ಅಂಗಡಿ ಇಟ್ಟಿದ್ರು. ಆವಾಗ ಮಾರಾಟಕ್ಕೆಂದು ಇಟ್ಟಿದ್ದ ಪಟಾಕಿ ಪಿಸ್ತೂಲನ್ನು ತಮಾಷೆಗೆಂದು ಸುಖಾನಂದ ತನ್ನ ಕ್ವಾಲಿಸ್ನಲ್ಲಿಟ್ಟಿದ್ದ. ಆವತ್ತು ಹೀಗೇ ಮಂಗಳೂರಿಗೆ ಹೋಗುವಾಗ ಎದುರಿನಲ್ಲಿ ಈತನ ಮನೆ ಪಕ್ಕದ ಗೆಳೆಯರಿಬ್ಬರು ಬೈಕ್ನಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ ಹೋಗುತ್ತಿರುವಾಗ ಸಿಕ್ಕವರನ್ನು ಕಿಚಾಯಿಸಿ, ತಮಾಷೆ ಮಾಡಿ ಗಮ್ಮತ್ತು ಮಾಡಿಕೊಂಡು ಹೋಗುವುದು ಮಾಮುಲಿ. ಎದುರಿಗೆ ಸಿಕ್ಕವನಲ್ಲಿ ಅದ್ಯಾವುದೋ ಭಾಷೆಯಲ್ಲಿ 'ನಮ್ಗಮ್ನಬಸಜಲಜಜದುಗಡತರೆಡೆಪಞವನಚ್ವಡ್;;ಖಧೋಧಠಾಘಣಣಝ...' ವಿಚಿತ್ರವಾಗಿ ಮಾತಾಡಿ ದಾರಿಹೋಕರಿಗೂ ಗೊಂದಲ ಮಾಡಿ ನಗುತ್ತಾ ಬರುತ್ತೇವೆ ಮಾರಾಯರೇ ಅಂತ ಹೇಳಿ ತಮಾಷೆ ಮಾಡಿಕೊಂಡು ಹೋಗುವ ಸುಖಾನಂದ ಕೆಲ ಸಲ ಉಡುಪಿ ಹಾದಿ ಮಧ್ಯೆ ಕಾರು ನಿಲ್ಲಿಸಿ, ಪುತ್ತೂರಿಗೆ ಹೇಗೆ ಹೋಗಬೇಕು ಮಾರಾಯರೇ ಅಂತ ಕೇಳುತ್ತಿದ್ದ. ಅವರು ಇದು ಉಡುಪಿ ಹಾದಿ, ಪುತ್ತೂರಿಗೆ ಹೀಹೀಹೀ...ಗೆ ಹೋಗಬೇಕು ಅನ್ನುವ ಹೊತ್ತಿಗೆ ಕಾರು ಉಡುಪಿ ಕಡೆ ಹೋಗಿ ಆಗಿರುತ್ತಿತ್ತು. ದಾರಿ ಹೇಳುವವ ಬಾಯಿಮುಚ್ಚಿ ತಲೆ ಬಿಸಿ ಮಾಡಿಕೊಂಡು ಹೋಗಬೇಕು. ಇಂತಹ ಅನೇಕ ಗಮ್ಮತ್ತುಗಳ ಸುಖಾನಂದ ಒಮ್ಮೆ ಸ್ಥಳೀಯವಾಗಿದ್ದ ವೇದಿಕೆಯ ಹುಚ್ಚು ಹಚ್ಚಿಸಿಕೊಂಡಿದ್ದ ರಂಗನಾಥ ಎಂಬವನಿಗೆ ಸಂಮಾನ ಕಾರ್ಯಕ್ರಮವನ್ನು ಗೆಳೆಯರ ಮುಲಕ ಏರ್ಪಡಿಸಿದ್ದ. ತನಗೆ ಸಂಮಾನ ಅಂತ ಸಿಕ್ಕಾಪಟ್ಟೆ ಡೊನೇಶನ್ ಕೊಟ್ಟು ಕಾರ್ಯಕ್ರಮದ ದಿನ ಹೊಸಾ ಬಟ್ಟೆ ಹಾಕಿಕೊಂಡು ಹೋದರೆ ಕಾರ್ಯಕ್ರಮವೇ ಇಲ್ಲ!
ಇಂತಹ ಸುಖಾನಂದನಿಗೆ ಮಂಗಳೂರಿಗೆ ಹೋಗುವಾಗ ಬೈಕಲ್ಲಿ ಗೆಳೆಯರಿಬ್ಬರು ಸಿಕ್ಕರಲ್ಲ; ತನ್ನ ಕ್ವಾಲಿಸ್ನ ಗ್ಲಾಸು ಹಾಕಿ ಬೈಕನ್ನು ನಿಧಾನವಾಗಿ ಫೋಲೋ ಮಾಡತೊಡಗಿದ. ಬೈಕು ನಿಲ್ಲಿಸಿದಾಗ ಕ್ವಾಲಿಸ್ ನ್ನೂ ನಿಲ್ಲಿಸುತ್ತಿದ್ದ. ಮಂಗಳೂರು ಲಾಲ್ ಭಾಗ್ ಸ್ಟಾಪ್ ನಲ್ಲಿ ಸಿಗ್ನಲ್ ಆದಾಗ ಬೈಕ್ ನಿಂತಿತಲ್ಲ. ಬೈಕಿನಲ್ಲಿ ಹಿಂಬದಿಯಲ್ಲಿ ಕೂತಿದ್ದವ ಮೆಲ್ಲನೆ ಹಿಂತಿರುಗಿ ನೋಡಿದ. ಸುಖಾನಂದ ಗ್ಲಾಸಿನಲ್ಲಿ ಪಟಾಕಿ ಅಂಗಡಿಯ ಪಿಸ್ತೂಲು ಹಿಡಿದದ್ದು ಕಂಡಿತು. ಆದರೆ ಸುಖಾನಂದನ ಮುಖ ಕಾಣುತ್ತಿರಲಿಲ್ಲ. ಒಂದು ವೇಳೆ ಮುಖ ಕಾಣುತ್ತಿದ್ದರೆ ಗೆಳೆಯನನ್ನು ನೋಡಿ ಸುಮ್ಮನಾಗಬಹುದಿತ್ತು. ಆದರೆ ಪಿಸ್ತೂಲು ಕಂಡವರೇ ಬೈಕ್ ಅಡ್ಡ ಹಾಕಿ ಓಟಕಿತ್ತರು. ಕೂಗಿ ಕರೆದರೂ ಹಿಂತಿರುಗಿ ನೋಡುವಷ್ಟು ದೈರ್ಯ ಇಲ್ಲ. ಬೈಕನಲ್ಲಿದ್ದವರಿಬ್ಬರೂ ಸೀದಾ ಓಡೀ ಓಡೀ ಬರ್ಕೆ ಪೊಲೀಸ್ ಸ್ಟೇಷನ್ಗೆ ಹೋಗಿ ಪಿಸ್ತೂಲು ಬಗ್ಗೆ ದೂರು ನೀಡಿದರು. ಆದರೆ ಬರ್ಕೆಯವರು ಲಾಲ್ಭಾಗ್ ನಮ್ಮದಲ್ಲ, ನೀವು ಉರ್ವಕ್ಕೆ ಹೋಗಿ ಕಂಪ್ಲೇಟು ಕೊಡಿ ಎಂದರು. ಪಾಪ, ಇವರಿಬ್ಬರೂ ಉರ್ವ ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೇಂಟು ಕೊಟ್ಟರು.
ಬೈಕ್ ಬಿಟ್ಟು ಓಡಿದ್ದನ್ನು ನೋಡಿದ ಟ್ರಾಫಿಕ್ ಪೋಲಿಸ್ ಕಂಟ್ರೋಲ್ ರೂಂಗೆ ಹೇಳಿದ. ಕೂಡಲೇ ಸ್ಪಾಟಿಗೆ ಎಸ್ಪಿ, ಎಡಿಎಸ್ಪಿ, ರೌಡಿ ನಿಗ್ರಹ ದಳ, ಡಿವೈಎಸ್ಪಿ ಎಲ್ಲ ಬಂದ್ರು. ಹೆದ್ದಾರಿಯಲ್ಲಿ ನಾಕಾ ಬಂದ್ ಹಾಕಲಾಯಿತು. ಸಿಟಿ ಹೊರಗೆ ಎಲ್ಲೆಡೆಯೂ ನಾಕಾ ಬಂದ್, ಎಲ್ಲ ವಾಹನಗಳ ತಪಾಸಣೆ ನಡೆಯುತ್ತಿತ್ತು.
ಇಲ್ಲಿ ಲಾಲ್ ಭಾಗ್ನಲ್ಲಿ ಸಿಗ್ನಲ್ ಓಪನ್ ಆಯಿತಲ್ಲ, ಸುಖಾನಂದ ಕಾರನ್ನು ಡಿಸಿ ಆಫೀಸಿಗೆ ಕೊಂಡೊಯ್ದು ಅಲ್ಲಿ ಕೆಲಸ ಮುಗಿಸಿ, ಬಿಜೆಪಿ ಆಫೀಸಿಗೆ ಬಂದು, ಆಮೇಲೆ ಊಟ ಮಾಡಿಯೂ ಆಗಿತ್ತು. ಆದರೆ ಈ ಪೊಲೀಸು ತನಿಕೆ, ನಾಕಾಬಂದ್ ಇದ್ಯಾವುದೂ ಗೊತ್ತಿರದ ಸುಖಾನಂದ ಗೆಳೆಯರ ಮನೆಗೆ ಫೋನು ಮಾಡಿ, ಅವರ ಮನೆಯವರಲ್ಲಿ ತಾನು ತಮಾಷೆಗೆಂದು ಆಟಿಕೆ ಪಿಸ್ತೂಲು ತೋರಿಸಿದ್ದು, ಅವರು ಓಡಿಹೋಗಿದ್ದನ್ನು ಎಲ್ಲ ಹೇಳಿ, ಅವರನ್ನು ಹುಡುಕುವ ಪ್ರಯತ್ನದಲ್ಲಿದ್ದ. ಕೊನೆಗೆ ಪರಿಚಯದ ಪೊಲೀಸ್ ಅಧಿಕಾರಿಗಳಲ್ಲೂ ಈ ವಿಷಯ ಹೇಳಿದೆವು. ಒಬ್ಬ ಅಧಿಕಾರಿ ನೀವ್ಯಾಕೆ ಹುಡುಗಾಟಿಕೆ ಮಾಡುವುದು, ಪರಿಸ್ಥಿತಿ ಕೈಮೀರಿದೆ, ಪಿಸ್ತೂಲು ಆಟಿಕೆಯದ್ದಾದರೂ ಕೇಸು ಗ್ಯಾರಂಟಿ ಅಂತ ಹೆದರಿಸಿ ಬಿಟ್ಟಿದ್ದರು. ಮತ್ತೊಬ್ಬ ಅಧಿಕಾರಿ ಹೇಳಿದರು; ಪಿಸ್ತೂಲು ತೋರಿಸಿದ್ದು ಯಾರೂಂತ ಗೊತ್ತಿಲ್ಲ, ನೀವು ನಿಮ್ಮ ಪಾಡಿಗೆ ಹೋಗಿ ಮಾರಾಯ್ರೇ, ಸ್ವಲ್ಪ ಹುಡುಕುತ್ತಾರೆ, ಆಮೇಲೆ ಪೋಲೀಸರೂ ಸುಮ್ಮನಾಗುತ್ತಾರೆ ಅಂದರು.
ಆದರೂ ಸುಖಾನಂದನಿಗೆ ಸಮಾಧಾನವಿಲ್ಲ. ಕೊನೆಗೆ ಓಡಿದ ಗೆಳೆಯರು ಉರ್ವ ಸ್ಟೇಷನ್ನಲ್ಲಿದ್ದಾರೆ ಅಂತ ಗೊತ್ತಾಯಿತು. ಅಲ್ಲಿಗೇ ಫೋನು ಮಾಡಿ ಇನ್ಸ್ ಪೆಕ್ಟರ್ ಸಾಹೇಬರಲ್ಲಿ ನಾನು ಸುಖಾನಂದ, ಗಮ್ಮತ್ತಿಗೆ ಹೇಳಿದ್ದು, ಹೀಗೆಲ್ಲ ಆಯಿತು. ಅವರು ಬಂದವರನ್ನು ಹೋಗಲು ಹೇಳಿ, ಅವರಲ್ಲಿ ಮಾತಾಡಲು ಫೋನು ಕೊಡಿ ಅಂತ ಹೇಳಿದರೆ, ಅಧಿಕಾರಿ ರಾಂಗ್ ಆದರು. ನೀವು ಯಾರೇ ಆಗಿರಲಿ, ಮೊದಲು ಇಲ್ಲಿಗೆ ಬನ್ನಿ. ಪಿಸ್ತೂಲು ಆಟಿಕೆಯದ್ದಾದರೂ ಪರವಾಗಿಲ್ಲ ತನ್ನಿ ಅಂತ ಬೈದ್ರು.
ಪೋಲೀಸರು ಹುಡುಕುತ್ತಿದ್ದಾರೆಂದು ಗೊತ್ತಾಗಿ ಆಟಿಕೆ ಪಿಸ್ತೂಲನ್ನು ಪ್ಯಾಕ್ ಮಾಡಿ ಅಂಗಡಿಯೊಂದರಲ್ಲಿ ಈಈಈಗ ಬರುತ್ತೇವೆ ಅಂತ ಅಡಗಿಸಿ ಇಟ್ಟಿದ್ದೆವು. ಸ್ಟೇಷನ್ಗೆ ಪಿಸ್ತೂಲು ತರಲು ಹೇಳಿದರಲ್ಲ, ಅಂಗಡಿಗೆ ಹೋದರೆ ಅವರು ಬೀಗ ಹಾಕಿ ಮನೆಗೆ ಹೋಗಿದ್ದರು. ಕೊನೆಗೆ ಮನೆ ಹುಡುಕಿಕೊಂಡು ಹೋಗಿ, ಅವರನ್ನು ಕರೆದುಕೊಂಡು ಬಂದು ಅಂಗಡಿ ಬೀಗ ತೆಗೆಸಿ, ಪಿಸ್ತೂಲು ಪ್ಯಾಕನ್ನು ಪಡೆದು ಸ್ಟೇಷನ್ಗೆ ಹೋಗಿ ಕೊಡುವ ಹೊತ್ತಿಗೆ ಸಂಜೆ ಆಗಿತ್ತು.
ಈ ಮಧ್ಯೆ ಶಾಸಕ ಯೋಗೀಶ್ ಭಟ್ಟರಲ್ಲಿ ಉರ್ವ ಪೋಲೀಸರಿಗೆ ಸ್ವಲ್ಪ ಹೇಳಿ ಮಾರಾಯ್ರೇ ಅಂತ ವಿನಂತಿಸಿದ್ದಕ್ಕೆ ಅವರು ಮಾರ್ಗದಲ್ಲೇ ಕೈಯೆತ್ತಿ ಟಾಟಾ ಮಾಡಿ ಸೀದಾ ಹೋದರು!
ಸುಖಾನಂದ ನಿಮ್ಮ ಗೆಳೆಯರಾಗಿರಬಹುದು, ಆಟಿಕೆ ಪಿಸ್ತೂಲು ಕಂಡ ಕೂಡಲೇ ನೀವು ಹೀಗೆ ಬೈಕು ಬಿಟ್ಟು ಓಡಿ ಹೋಗಬೇಕಾದ್ರೆ ನೀವೂ ಯಾವುದೋ ಗ್ಯಾಂಗಿನಲ್ಲಿರಬೇಕು. ಬಾಂಬೆಯಲ್ಲಿದ್ರಾ? ಹಾಗಾದ್ರೆ ಯಾವುದಾದರೂ ಮರ್ಡರ್ ನಲ್ಲಿದ್ದೀರಾ? ಎಷ್ಟು ಕೇಸುಗಳಿವೆ ನಿಮ್ಮ ಮೇಲೆ ಸತ್ಯ ಹೇಳಿ? ನೀವು ಹೀಗೆ ಓಡಿ ಬಂದಿರಬೇಕಾದ್ರೇ ನೀವೂ ರೌಡಿಗಳಾಗಿರಬೇಕು ಅಂತ ಸ್ಟೇಷನ್ನಿನಲ್ಲಿ ಪೋಲೀಸರು ಕಂಪ್ಲೇಂಟು ಕೊಡಲು ಬಂದ ಇಬ್ಬರನ್ನೂ ಸತಾಯಿಸಿದ್ದರು.
ಕೊನೆಗೂ ಪೋಲೀಸರಿಗೆಲ್ಲ ಒಂದಿಷ್ಟು ಹಂಚಿ, ಪಿಸ್ತೂಲು ಕಂಡು ಹೆದರಿ ಓಡಿದ್ದ ಗೆಳೆಯರನ್ನೂ ಜೊತೆಗೆ ಕರೆದುಕೊಂಡು ವಾಪಾಸಾಗುವ ಹೊತ್ತಿಗೆ ಸುಖಾನಂದ ಹೇಳಿದ್ದ; ನನ್ನ ಜನ್ಮದಲ್ಲಿ ಇನ್ನು ಮುಂದೆ ದಾರಿಯಲ್ಲಿ ಹೋಗುವವರನ್ನು ತಮಾಷೆ ಮಾಡುದಿಲ್ಲ. ಇನ್ಯಾವತ್ತೂ ನಿಜ ಬಿಡಿ, ಆಟಿಕೆ ಪಿಸ್ತೂಲನ್ನೂ ಹಿಡಿಯುವುದಿಲ್ಲ ಅಂತ.
ಆದರೆ ಆ ಅವಕಾಶವನ್ನು ಮುಲ್ಕಿ ರಫೀಕ್ ಟೀಮು ಕೊಡಲಿಲ್ಲ.

Sunday, December 7, 2008

ಸುಖಾನಂದನ ನೆನೆದು







ಸುಖಾನಂದ ಶೆಟ್ಟಿ!
2006ರ ಡಿಸೆಂಬರ್ 1ರಂದು ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಮಂಗಳೂರು ಕುಳಾಯಿಯ ಮಾರ್ಬಲ್ ಟ್ರೇಡ್ ಬಳಿ ತನ್ನ ಕ್ವಾಲಿಸ್ನಿಂದ ಇಳಿಯುತ್ತಿರುವಾಗ ಪಾತಕಿ ಮುಲ್ಕಿ ರಫೀಕ್ ಮತ್ತಾತನ ಹಂತಕರ ಗ್ಯಾಂಗ್ ತಲವಾರುಗಳಿಂದ ಕತ್ತರಿಸಿ ಹಾಕಿ ಪರಾರಿಯಾಯಿತಲ್ಲ, ಆವಾಗ ಆತನನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾದಿಯಲ್ಲಿ ಸಾವಿನೆಡೆಗೆ ಸಾಗುತ್ತಿರುವಾಗಲೇ ಆತ ಅಂದನಂತೆ; ನನ್ನನ್ನು ಒಮ್ಮೆ ಬದುಕಿಸಿ, ಆಮೇಲೆ ಅವರನ್ನು ನಾನು ನೋಡಿಕೊಳ್ಳುತ್ತೇನೆ. ಆದರೆ ಆತ ಬದುಕಲಿಲ್ಲ. ಬದುಕಿದ್ದರೆ ಹಂತಕರಲ್ಲಿ ಅನೇಕರು ಅಂಗವಿಕಲರಾಗುತ್ತಿದ್ದರು!
ಆತ ಮುಲ್ಕಿಯಲ್ಲಿ ಥೇಟು ಸಿನಿಮಾ ಹೀರೋ ಥರ ಕ್ವಾಲಿಸ್ ಕಾರಿನಲ್ಲಿ ಬಂದಿಳಿಯುತ್ತಿದ್ದ. ಇಳಿದ ಕೂಡಲೇ ಸುತ್ತಲೂ ಜನ ಸೇರುತ್ತಿದ್ದರು. ಯಾರೋ ಒಬ್ಬ ಹುಡುಗಿಯನ್ನು ಚುಡಾಯಿಸಿದವನನ್ನು ಪೊಲೀಸರು ಹಿಡಿದು ಕೇಸೇ ಹಾಕದೆ ಹಾಗೆಯೇ ಬಿಟ್ಟು ಬಿಟ್ಟರು ಅಂತ ಗೊತ್ತಾದ ಕೂಡಲೇ ನೇರ ಸ್ಟೇಷನ್ ಮುಂದೆ ನಿಂತು ಪ್ರತಿಭಟನೆಗೆ ನಿಲ್ಲುತ್ತಿದ್ದ. ನೋಡುನೋಡುತ್ತಿದ್ದಂತೆ ಒಂದು ಗಂಟೆಯೊಳಗೆ ಐನೂರು ಮಂದಿ. ನಿಮಗೆ ಗೊತ್ತಿರಲಿ; ನೂರು ಮಂದಿಯನ್ನು ಅದೂ ಪೊಲೀಸ್ ಠಾಣೆಯ ಮುಂದೆ ಸೇರಿಸುವುದೆಂದರೆ ಸುಮ್ಮನೆ ಮಾತಲ್ಲ. ಆ ಕಾರಣಕ್ಕಾಗಿಯೇ ಅನೇಕ ಹುಡುಗಿಯರು ಪುಂಡ ಹುಡುಗರ ಕೀಟಲೆ ಜಾಸ್ತಿಯಾದಾಗ ಸುಖಾನಂದನಿಗೆ ಫೋನು ಮಾಡಿ ಸಹಾಯ ಕೇಳುತ್ತಿದ್ದರು.
ಖಡಕ್ ಮಾತು, ನೇರ ನುಡಿ, ತುಂಬ ಸಪೂರವಾದರೂ ಮಹಾ ತಾಕತ್ತಿನ ದೇಹ, ಆಕರ್ಷಕ ವ್ಯಕ್ತಿತ್ವ, ಶುಭ್ರ ಮನಸ್ಸು, ಸದಾ ಹಾಸ್ಯ, ಲವಲವಿಕೆಯ ಕಾರಣಗಳಿಗಾಗಿ ಒಮ್ಮೆ ಸಂಪರ್ಕಕ್ಕೆ ಬಂದರೆ ಅಭಿಮಾನಿಯಾಗಿ, ಬೆಂಬಲಿಗನಾಗಿ ಮಾಡುವಂತಹ ಶಕ್ತಿ ಸುಖಾನಂದನಿಗಿತ್ತು. ಮುಲ್ಕಿ ನಗರ ಪಂಚಾಯತ್ ನ ಏಕೈಕ ಬಿಜೆಪಿ ಸದಸ್ಯನಾಗಿದ್ದ ಈತ ಸಭೆಗೆ ಹಾಜರಾದರೆ ಮಾತ್ರ ವರದಿಗಾರರಿಗೆ ಸುದ್ದಿ. ಇಲ್ಲದಿದ್ದರೆ ಸಮಸ್ಯೆಗಳ ಬಗ್ಗೆ ಅಲ್ಲಿ ಧ್ವನಿಯೇ ಇರಲಿಲ್ಲ.
ಬದುಕಿದ್ದರೆ ಆತ ಮುಡುಬಿದ್ರೆ ಕ್ಷೇತ್ರಕ್ಕೆ ಶಾಸಕನಾಗಿರುತ್ತಿದ್ದ.
ಮೊನ್ನೆ ಒಂದು ತಾರೀಕಿಗೆ ಆತ ಇಲ್ಲವಾಗಿ ಎರಡು ವರುಷವಾಯಿತು. ಈತನ ಶವಯಾತ್ರೆಯಲ್ಲಿ ಹತ್ತು ಸಾವಿರದಷ್ಟು ಮಂದಿ ಭಾಗವಹಿಸಿದ್ದರು. ಪೊಲೀಸರು ವಿನಾಕಾರಣ ಗೋಲೀಬಾರ್ ಮಾಡಿ ದಿನೇಶ್ ಮತ್ತು ಪ್ರೇಮ್ ಎಂಬವರ ಸಾವಿಗೆ ಕಾರಣವಾಗಿದ್ದರು.
ಇವತ್ತಿಗೂ ದಿನೇಶ್ ಮನೆಯವರಿಗೆ ಗೋಲೀಬಾರ್ ಬಗ್ಗೆ ಛಾರ್ಜ್ ಶೀಟ್ ಹಾಕದ ಕಾರಣ ವಿಮೆ ಸಿಕ್ಕಿಲ್ಲ. ಬಿಜೆಪಿಯ ಯಾವ ನಾಯಕನೂ ಇತ್ತ ತಲೆ ಹಾಕುತ್ತಿಲ್ಲ. ಅಲ್ಲಿ ಮಾನಂಪಾಡಿಯ ಸುಖಾನಂದನ ಮನೆಯಲ್ಲಿ ಬಾಗಿಲಿಗೆ ಬೀಗ ಹಾಕಿ ವರುಷ ಎರಡು ಕಳೆದಿದೆ. ಅಲ್ಲಿ ಮೌನ ಬಿಟ್ಟು ಮತ್ತಾರೂ ಇಲ್ಲ.
ಆತನಿದ್ದಾಗ ಮುಲ್ಕಿಗೇ ಒಂದು ಕಳೆಯಿದ್ದಂತೆ ಇತ್ತು. ಆತ ಮತ್ತೆ ಮತ್ತೆ ನೆನಪಾಗುತ್ತಿದ್ದಾನೆ.
ಸುಖಾನಂದನಿಗೆ ನುಡಿ ನಮನ.