Sunday, October 19, 2008

ಕಾಫಿ ಕುಡಿದು ಬನ್ನಿ!

ನೀವು ಶಿವಮೊಗ್ಗದಿಂದ ಸಾಗರ ಹಾದಿಯಲ್ಲಿ ಏಳು ಕಿಲೋಮೀಟರ್ ದೂರ ಸಾಗಿದರೆ ಸಿಂಹ ಹುಲಿ ಧಾಮ ಸಿಗುತ್ತದೆ.
ಅಲ್ಲಿಗೆ ಎರಡು ವರುಷದ ಹಿಂದೆ ಈಗ ಡೆಲ್ಲಿಯಲ್ಲಿರುವ ತುಂಬ ಚಂದದ, ಮತ್ತು ಚಂದದ ಮಾತುಗಾರ, ಭಯೋತ್ಪಾದಕ ಪತ್ರಕರ್ತ ವಿನಾಯಕ ಭಟ್ಟ, 3ನೆಯ ಕಣ್ಣು ಅದ್ಭುತವಾಗಿರುವ(ಛಾಯಾಗ್ರಹಕ)ಮಂಜುನಾಥ ಅಲಿಯಾಸ್ 'ಮಂಜು' ನೀರೇಶ್ವಾಲ್ಯ, ಮಂಗಳೂರಿನ ಮಹೇಶ, ಶೇಣಿಯವರ ಮೊಮ್ಮಗ ಬಾಲಮುರಳಿ ಎಲ್ಲ ಸೇರಿ ಥೇಟು ಹುಲಿ ಸಿಂಹಗಳಂತಿರುವ ನಾವು ಇಲ್ಲಿಗೆ ಹೋಗಿ ಬಂದಿದ್ದೆವು.
ಈಗ ಮತ್ತೊಮ್ಮೆ ಹೋಗಿ ಬಂದದ್ದು ನನ್ನ ಮನೆ ಮಂದಿಯೊಂದಿಗೆ. ಅಮ್ಮ, ಹೆಂಡ್ತಿ, ತಮ್ಮಂದಿರು, ಸ್ನೇಹಿತ ದಂಪತಿಗಳೊಂದಿಗೆ ಒಂದು ತಿರುಗಾಟ.
ಅಲ್ಲಿ ಚಿರತೆ, ಹೆಬ್ಬಾವು, ನವಿಲು, ಕರಡಿ, ನರಿ ಹೀಗೆ ಬೆರಳೆಣಿಕೆಯ ಪ್ರಾಣಿಗಳಿರುವ ಪುಟ್ಟ ಮ್ರಗಾಲಯವೂ ಇದೆ. ಮಂಗಗಳ ಕಾಟ ವಿಪರೀತ. ಕಾಲೇಜಿನ ಪ್ರೇಮಿಗಳು ಟೈಂ ಪಾಸ್ ಮಾಡಲೂ ಇಲ್ಲಿಗೆ ಬರುತ್ತಾರೆ. ಪೊದೆಗಳೆಡೆಯಲ್ಲಿ ಹೊರಳಾಡುತ್ತಿರುತ್ತಾರೆ. ಪ್ರವಾಸಿಗರು ಪ್ರೇಮಿಗಳ ಆಟ ಕೂಟ, ಹೊರಳಾಟಗಳನ್ನು ನೋಡಿಯೂ, ನೋಡದಂತೆ ನಟಿಸುತ್ತಾ ಮುಂದಕ್ಕೆ ಸಾಗುತ್ತಿರುತ್ತಾರೆ. ಮೆಲ್ಲನೆ ಹಿಂದಿರುಗಿ ಇಣುಕಿ, ತಲೆ ಕೆಡಿಸಿಕೊಂಡು (ಜೊತೆಗೆ ಹೆಂಡ್ತಿಯಿದ್ದರೂ) ಮುಂದಕ್ಕೆ ಹೋಗುತ್ತಿರುತ್ತಾರೆ; ನನ್ನಂತೆ!
ಮಧ್ಯಾಹ್ನ ಒಂದು ಗಂಟೆಯಿಂದ 2.15ರ ತನಕ ಮತ್ತು ಸಂಜೆ 5ರ ಬಳಿಕ ಹುಲಿ ಸಿಂಹ ಧಾಮದೊಳಕ್ಕೆ ಹೋಗುವಂತಿಲ್ಲ. ಪ್ರತಿ ತಲೆಗೆ 30ರೂಪಾಯಿಯಂತೆ ವಸೂಲು ಮಾಡಿ ವ್ಯಾನಿನಲ್ಲಿ ಕೂರಿಸಿ, ಧಾಮದೊಳಕ್ಕೆ ಕರೆದೊಯ್ಯುತ್ತಾರೆ. ವ್ಯಾನಿನ ಪಕ್ಕದಲ್ಲೇ ಹುಲಿಗಳು, ಸಿಂಹಗಳು, ಜಿಂಕೆ, ಕ್ರಷ್ಣಮ್ರಗಗಳು ಸುತ್ತಾಡುತ್ತಿರುತ್ತವೆ.
ಹುಲಿಗಳನ್ನು ಅತ್ಯಂತ ಹತ್ತಿರದಿಂದ, ಸ್ವತಂತ್ರ(!)ವಾಗಿ ಸುತ್ತಾಡುವುದನ್ನು ಇಲ್ಲಿ ಕಾಣಬಹುದು. ಕೋಪದಿಂದ ವ್ಯಾನಿನ ಮೇಲೆ ಅಟಾಕ್ ಮಾಡಿದರೆ, 180ಪೌಂಡ್ ಭಾರದ ಶಕ್ತಿಯಿರುತ್ತದೆ. ಅಂದ್ರೆ ವ್ಯಾನಿನ ಗ್ಲಾಸು, ತಂತಿ ಬಲೆ ಲೆಕ್ಕವೇ ಅಲ್ಲ ಎಂದು ಡ್ರೈವರ್ ಹೇಳುವ ಹೊತ್ತಿಗೆ ಒಳಗಿದ್ದವರೆಲ್ಲ ಬಾಯಿ ಮುಚ್ಚಿ ಕೂರುತ್ತಾರೆ, ಹುಲಿಗೆ ಕೋಪ ಬರದಿರಲೆಂದು.
ಹನ್ನೆರಡು ಕೆಜಿ ಮಾಂಸ ಡೈಲಿ ಕೊಡುತ್ತೇವೆ ಈ ಎಲ್ಲ ಹುಲಿಗಳಿಗೆ. ಸಿಂಹಕ್ಕೂ. ಬ್ಯಾಚ್ ವೈಸ್ ಐದೈದು ಸಿಂಹ ಬಿಡುತ್ತೇವೆ. ಇಲ್ಲದಿದ್ರೆ ಅವು ಕಚ್ಚಾಡಿಕೊಂಡು ಸಾಯುತ್ತವೆ ಅಂತ ವಿವಿರಿಸುತ್ತಾನೆ ಡ್ರೈವರ್. ಪಕ್ಕದಲ್ಲಿ ಅಪ್ಪ ತನ್ನ ಮಗುವಿಗೆ ವಿವರಿಸುತ್ತಾ ಇರುತ್ತಾನೆ, ನೋಡೂ ಹುಲಿ, ಅದರ ಮುಖ ನೋಡು, ಉಗುರು ನೋಡು....
ಕಳೆದ ವರುಷ ಒಬ್ಬ ಹುಲಿ ದಾಳಿಗೆ ಸತ್ತೇ ಹೋಗಿದ್ದಾನೆ. ಆ ಸಿಂಹ ಹೆಣ್ಣು ಸಿಂಹವನ್ನು ಕೊಂದೇ ಹಾಕಿದೆ ಅಂತ ವಿವರಿಸುವ ಡ್ರೈವರ್ ಗಂಭೀರವಾಗಿರುವಾಗಲೇ ಮತ್ತೊಂದು ಹುಲಿಯನ್ನು ತೋರಿಸಿ ವಿವರಿಸುತ್ತಾನೆ; ಅದು ಹೆಣ್ಣುಲಿ. ಊರ್ವಶಿ ಅಂತ. ಮದುವೆ ಮಾಡದೆ, ಬೇಜಾರಿನಿಂದ ಇದೆ! ಭರತ್ ಎಂಬ ಹುಲಿಯ ಬಳಿ ವ್ಯಾನು ನಿಲ್ಲಿಸಿ, ಹಾ, ಐದು ನಿಮಿಷ ರೆಸ್ಟು ಇದೆ. ಟೀ ಕಾಫಿ ಕುಡಿಯುವವರು ಇಳಿಯಬಹುದು ಅನ್ನುತ್ತಾನೆ ಸಹಜ ರೀತಿಯಲ್ಲಿ! ನೀವೂ ಒಮ್ಮೆ ಅಲ್ಲಿಗೆ ಹೋದರೆ ಕಾಫಿ ಕುಡಿದು ಬರಬಹುದು!
ರಾಮಾಯಣದಲ್ಲಿ ಸೀತಾ ಮೇಡಮ್ ಕೇಳಿದ ಜಿಂಕೆ ಇದೇನೇ, ಸಲ್ಮನ್ ಖಾನ್ ಕೇಳಿದ ಕ್ರಷ್ಣ ಮ್ರಗ ಇದೇನೇ ಅಂತ ಪರಿಚಯ ಸಾಗುತ್ತದೆ.
ಅಂದ ಹಾಗೆ ಹೇಳಬೇಕಾದುದು ಏನೆಂದರೆ; ಧಾಮದೊಳಗೆ ಒಂದು ಕ್ಯಾಂಟೀನ್ ಇದೆ. ಅಲ್ಲಿ ಎಂಆರ್ಪಿ ಬೆಲೆಗಿಂತ ಜಾಸ್ತಿ ಬೆಲೆಗೆ ಬಿಸ್ಕಿಟ್, ಚಾಕ್ಲೆಟ್ ಮಾರುತ್ತಾರೆ. ಚಿಲ್ಲರೆ ಕೊಡಬೇಕಾದ ಬದಲು ಚಾಕ್ಲೆಟ್ ಕೊಟ್ಟು ಲೂಟುತ್ತಾರೆ. ನನ್ನ ತಮ್ಮಂದಿರು ಇಂಜಿನಿಯರುಗಳಾಗಿ ಮುಂಬೈ, ಚೆನ್ನೈ ಸೇರಿದ ಮೇಲೆ ಥೇಟು ಮಾರವಾಡಿಗಳಂತಾಗಿದ್ದಾರೆ. ನ್ಯಾಯ ಮಾತಾಡುತ್ತಾರೆ. ಚೌಕಾಸಿಗಿಳಿಯುತ್ತಾರೆ. ಇಬ್ಬರೂ ಕ್ಯಾಂಟಿನ್ನವನಲ್ಲಿ ಚರ್ಚೆಗಿಳಿದಿದ್ದರು. ಏಳು ರೂಪಾಯಿ ಎಂಆರ್ ಪಿ ಬರೆದ ಬಿಸ್ಕಿಟನ್ನು ಯಾಕೆ ಹತ್ತು ರೂಪಾಯಿಗೆ ಮಾರುವುದು? ಅಂಗಡಿಯಾತ ಅನಕ್ಷರಸ್ಥರಿಗೆ ವಿವರಿಸುವಂತೆ ಹೇಳುತ್ತಿದ್ದ, ನಾವು ಟ್ಯಾಕ್ಸ್ ಕಟ್ಟುತ್ತೇವೆ. ಹಾಗೆ ರೇಟು ಜಾಸ್ತಿ ಅಂತ!
ಮುಖ್ಯ ಮಂತ್ರಿಯ ಊರಿನಲ್ಲಿ ಹೀಗೆ ಮೋಸ ಮಾಡುವುದು ಸರಿಯಾ? ನೀನ್ಯಾವ ಪೊಟ್ಟು ಪತ್ರಕರ್ತ? ಅಂತ ನನ್ನನ್ನು ಕಿಚಾಯಿಸಿದ್ದಕ್ಕೆ ಧಾಮದಲ್ಲಿದ್ದ ದೂರು ಪೆಟ್ಟಿಗೆಗೆ ಕ್ಯಾಂಟಿನ್ನವನು ಮಾಡುವ ಮೋಸಗಳನ್ನು ಬರೆದು ಹಾಕಿ ಬಂದೆ. ನ್ಯಾಯದ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುವಂತೆ ನೋಡಿಕೊಳ್ಳಬೇಕು. ಮತ್ತೊಂದು ಕ್ಯಾಂಟಿನ್ ಗೆ ಅವಕಾಶ ಕೊಟ್ಟು ಏಕಸ್ವಾಮ್ಯತೆಯನ್ನು ಇಲ್ಲವಾಗಿಸಬೇಕು ಎಂದೆಲ್ಲ ದೂರಿನಲ್ಲಿ ಬರೆದಿದ್ದೆ. ಅದರಿಂದ ಪ್ರಯೋಜನವಾಗದು ಅಂತ ಗೊತ್ತಾಗಿ ನಿಮ್ಮ ಮುಂದೆ ವಿನಂತಿಸುವುದು ಏನೆಂದರೆ, ನೀವೂ ಹುಲಿ ಸಿಂಹ ಧಾಮಕ್ಕೆ ಹೋಗಿ ಬನ್ನಿ. ಅಲ್ಲಿನ ಸುಂದರ ಅನುಭವಗಳನ್ನು ನಿಮ್ಮದಾಗಿಸಿ. ಆಮೇಲೆ ನನಗಾಗಿ ಕ್ಯಾಂಟಿನ್ನವನೊಂದಿಗೆ ನ್ಯಾಯಯುತ ಬೆಲೆಗೆ ಜಗಳವಾಡಿ. ಅದಕ್ಕಾಗಿ ಬಿಸ್ಕಿಟ್ ಖರೀದಿಸಿ, ಕಾಫಿ ಕುಡಿಯಿರಿ!

5 comments:

ಪ್ರಿಯಾ ಕೆರ್ವಾಶೆ said...

ಸದ್ಯ ಆ ಹುಲಿಗಳು ನಿಮ್ಮಿಂದ ಪಾರಾದವು ಅನ್ನುವುದೇ ನೆಮ್ಮದಿಯ ವಿಷಯ.

ವಿನಾಯಕ ಭಟ್ಟ said...

ನಾವು ಹೋದಾಗ ಅಲ್ಲೊಂದು ಹಳದಿಗಿಣಿ ತೋರಿಸಿದ್ದೆ ನೀನು! ನೆನಪಿದೆಯಾ?
ಅಲ್ಲಿ ಗಂಡು ಸಿಂಹ - ಹೆಣ್ಣು ಸಿಂಹವನ್ನು ಕೊಂದುಹಾಕಿತ್ತು. ಅದಕ್ಕೆ ವಾಹನದ ಚಾಲಕ ಆ ಗಂಡುಸಿಂಹಕ್ಕೆ ವಿಕೃತ ಕಾಮಿ ರೆಡ್ಡಿಯ ಹೆಸರಿಟ್ಟಿದ್ದಾನೆ....
ನನ್ನನ್ನು ಇಷ್ಟು ದಿನ ಕ್ರೈಂ ರಿಪೋರ್ಟರ್ ಎಂಬುದನ್ನು ಕನ್ನಡೀಕರಿಸಿ ಅಪರಾಧಿ ವರದಿಗಾರ ಅನ್ನುತ್ತಿದ್ದರು. ಈಗ ದಿಲ್ಲಿಗೆ ಬಂದರೆ ನೀನು ಭಯೋತ್ಪಾದಕ ವರದಿಗಾರ ಅಂತ ಪ್ರಮೋಶನ್ ಕೊಟ್ಟಿದ್ದೀಯಾ? ನಿನ್ನ ಬಗ್ಗೆ ಗೊತ್ತಿದ್ದನ್ನೆಲ್ಲಾ ಬ್ಲಾಗಿಸಿಯೇನು ಎಚ್ಚರ!!!!

ಮಿಥುನ ಕೊಡೆತ್ತೂರು said...

ಸಾಮಾನ್ಯವಾಗಿ ಮಾತಿದೆಯಲ್ಲ;
ಅವ ಅಲ್ಲಿ ಕಾರ್ಯಕ್ರಮವನ್ನು ಎಷ್ಟು ಚೆನ್ನಾಗಿ ಮಾಡಿದ್ದಾನೆಂದರೆ ಭಯಂಕರ ಮಾರಾಯ!
ಇವತ್ತು ಮದುವೆ ಊಟ ಹೇಗಿತ್ತೆಂದರೆ,ಭಯಂಕರ ಮಾರಾಯ್ರೇ!
ಇವ ಎಷ್ಟು ಚೆನ್ನಾಗಿ ಭಾಷಣ ಮಾಡುತ್ತಾನೆಂದರೆ ಭಯಂಕರ!
ಅಬ್ಬಾ ಈ ಕೆಲಸವನ್ನು ಎಷ್ಟು ಬೇಗ, ಚೆನ್ನಾಗಿ ಮಾಡಿ ಮುಗಿಸಿದ್ದಿಯೆಂದರೆ ನೀನು ಭಯಂಕರ ಇದ್ದಿ!
ಬೆಕ್ಕು ಮತ್ತು ಇಲಿ ಒಂದೇ ಗೂಡಿನಲ್ಲಿ ಬದುಕುತ್ತಿರುವುದರ ಬಗ್ಗೆ ಅವನು ಭಯಂಕರ ಚೆನ್ನಾಗಿ ಬರೆದಿದ್ದಾನೆ ಗೊತ್ತಾ?!
ಹೀಗೇ ...
ಡೆಲ್ಲೀಲಿ ಕೂತು ವರದಿ ಮಾಡೋದೆಂದರೆ ಅಷ್ಟು ಸುಲಭಾನಾ? ಆ ವಿನಾಯಕ ಭಟ್ಟ ಭಯಂಕರ ಮಾರಾಯ್ರೇ!
ಹೆಂಗೆ? ಭಯೋತ್ಪಾದಕ ಪದಕ್ಕೆ ತಿದ್ದುಪಡಿ!
ಅಂದ ಹಾಗೆ ನನ್ನ ಬಗ್ಗೆ ಬ್ಲಾಗಿಸಿಯೇನು ಅಂತ ಭಯ ಹುಟ್ಟಿಸಿ, ಭಯೋತ್ಪಾದಕ ಅನ್ನಿಸುವುದು ಸರಿಯಾ ವೀಂಕಣ್ಣ?

shivu.k said...

ಸಾರ್, ಸಿಂಹ, ಹುಲಿಗಳ ಊರಿಗೆ ಹೋಗಿದ್ದೆವು ಅಂತೀರಿ. ಅವುಗಳ ಮಧ್ಯೆ ನಿಮಗೆ ಬೇಕಾದ ಕಾಫಿ ಟೀ ಕೊಡುವವರು ಜಾಸ್ತಿ ಬೆಲೆ ಕೇಳಿದರೆ ಕೊಡಿ. ಏಕೆಂದರೆ ಅವರು ತುಂಬಾ ರಿಸ್ಕಿನಲ್ಲಿರುತ್ತಾರೆ ನೀವೇಳಿದಂತೆ!

ನೀವು ನನ್ನ ಬ್ಲಾಗಿಗೊಮ್ಮೆ ಬನ್ನಿ. ನಾನು ಛಾಯಗ್ರಾಹಕನಾದ್ದರಿಂದ ನಿಮಗಿಷ್ಟವಾದ ಲೇಖನ ಹಾಗು ಫೋಟೊಗಳು ಸಿಗಬಹುದು.
ಹಾಗೆ ಮತ್ತೊಂದು ವಿಷಯ ನಾನು ಮತ್ತೊಂದು ವಿಭಿನ್ನ ವಿಚಾರವನ್ನು ಇಲ್ಲಿ ಬರೆಯುತ್ತಿದ್ದೇನೆ. ಅದರೊಳಗೆ ಬಂದ್ರೆ ನಿಮಗೆ ಹೊಸ ವಿಚಾರದ ಬಗ್ಗೆ ಖುಷಿಯೆನಿಸಬಹುದು. ಬನ್ನಿ:
http://camerahindhe.blogspot.com/

ರಾಧಾಕೃಷ್ಣ ಆನೆಗುಂಡಿ. said...

ಮದುವೆಯಾಗಿದ್ದಿ ಆಂತ ವಕ್ರದಂತ ಬ್ಲಾಗ್ ನಿಂದ ಗೊತ್ತಾಯಿತು.

ಸಾಕ್ಷಿಯಾಗಿ ಹಾಯ್ ನಲ್ಲಿ ಬಾಸ್ ಜೊತೆ photo ಬೇರೆ ಇತ್ತು..........

anyway....... ನನ್ನ ಶುಭಾಶಯ