Thursday, June 4, 2009

ನೀರು ಮತ್ತು ವಿದ್ಯುತ್


ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ನಾಲ್ಕು ಸಾವಿರ ಕೋಟಿ ರೂಪಾಯಿಯ ಯೋಜನೆಗೆ ಮುಂದಾಗುವ ಸರಕಾರಗಳು ಇಪ್ಪತ್ತು ಕೋಟಿ ಕೊಡಿ, ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸಿ ಕೊಡುತ್ತೇನೆ ಎಂದು ಕೇಳುವ ಮಲ್ಪೆಯ ವಿಜಯ್‌ರ ಮಾತಿಗೆ ಮನ್ನಣೆ ಕೊಡುವುದೇ ಇಲ್ಲ.ತಮಿಳುನಾಡಿನಲ್ಲಿ ಅನೇಕ ಕಡೆ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ದೊಡ್ಡ ದೊಡ್ಡ ಸಾವಿರಾರು ಫ್ಯಾನುಗಳನ್ನು ಕಾಣಬಹುದು. ಆದರೆ ನಮ್ಮ ಕರಾವಳಿಯಲ್ಲಿ ಯಾಕೆ ಇನ್ನೂ ಅಳವಡಿಸದೆ, ಪರಿಸರ ನಾಶ ಮಾಡುವ ಕಲ್ಲದ್ದಲು ಆಧಾರಿತವಾದ ಯೋಜನೆಗೇ ಮಣೆ ಹಾಕುತ್ತಿದ್ದಾರೆನ್ನುವುದೇ ಸೋಜಿಗ. ನಾಲ್ಕು ಸಾವಿರ ಕೋಟಿಯಲ್ಲಿ ಅನೇಕರಿಗೆ ಪಾಲು ಇದೆ ಅಂತ ಜನ ಸಾಮಾನ್ಯರೂ ಸುಲಭವಾಗಿ ತರ್ಕಿಸಬಹುದು. ನೀರಿನಿಂದ ವಿದ್ಯುತ್ ಉತ್ಪಾದಿಸುವ ನಮ್ಮ ತಂತ್ರಜ್ಞಾನ ಹೆಮ್ಮೆಯದ್ದೇ.ಆದರೆ ವಿದ್ಯುತ್ ಸೋರಿಕೆ, ಕಳ್ಳತನದ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯಲ್ಲಿ ಅಥವಾ ಯೋಜನೆಗಳ ಅನುಷ್ಟಾನದಲ್ಲಿ ನಮ್ಮ ನಡುವಿನ ಹೆಚ್ಚಿನ ಜನ ಪ್ರತಿನಿಧಿಗಳಿಗೆ ವಿಶೇಷ ಆಸಕ್ತಿ ಅಥವಾ ಮುತುವರ್ಜಿ ಇರುವುದಿಲ್ಲ. ಯೋಜನೆಗಳ ಪ್ರಕಟನೆ ಆಗುವಾ ಗಲೂ ಕೋಟಿ ಲೆಕ್ಕದಲ್ಲೇ ಹೇಳಿಕೆ ಕೊಡುವ ಮಂತ್ರಿಗಳು, ಶಾಸಕರು ಯೋಜನೆಗಳ ಕಾಮಗಾರಿ ಎಷ್ಟರಮಟ್ಟಿಗೆ ಸಮರ್ಪಕವಾಗಿ ಆಗಿವೆ ಎಂಬುದನ್ನು ಚಿಂತಿಸುವುದೇ ಇಲ್ಲ.ವಾರಾಹಿ ಯೋಜನೆ ನೂರಾರು ಕೋಟಿಗಳ ಖರ್ಚಿನ ಬಳಿಕವೂ ಪೂರ್ತಿಗೊಂಡಿಲ್ಲ. ಅದರ ಬಳಕೆಯೂ ಆರಂಭವಾಗಿಲ್ಲ. ಆದರೆ ಇಂಜಿನಿ ಯರು, ಗುತ್ತಿಗೆದಾರರು ದುಂಡಗಾಗುತ್ತಲೇ ಹೋದರು. ಅನೇಕರು ನಿವೃತ್ತರಾದರು!ಈಗ ನದಿ ತಿರುಗಿಸುತ್ತೇವೆ ಅಂತ ಕೆಲವರು ಹೊರಟಿದ್ದಾರೆ! ಪಕೃತಿ ಸಹಜವಾಗಿ ಸಮುದ್ರದೆಡೆಗೆ ಹರಿಯುವ ನದಿಯನ್ನು ಉಲ್ಟಾ ತಿರುಗಿಸುವುದೆಂದರೆ ಒಂದರ್ಥದಲ್ಲಿ ನದಿಯನ್ನೇ ಇಲ್ಲವಾಗಿಸುವ ಪ್ರಯತ್ನವಲ್ಲವೆ?ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಹಗಳು ಪ್ರಕಟವಾದರೂ ಹೆಚ್ಚಿನ ಜನ ಮಳೆಗಾಲದಲ್ಲಿ ನೀರು ಇಂಗಿಸುವ ಪುಟ್ಟ ಪ್ರಯತ್ನವನ್ನೂ ಮಾಡುತ್ತಿಲ್ಲ. ಕೆರೆಗಳ ಹೂಳೆತ್ತುವಿಕೆ, ನಿರ್ಮಾಣಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸದೆ, ಬೇಗ ಒಣಗಿಹೋಗುವ ಕೊಳವೆ ಬಾವಿಗಳನ್ನೇ ನಿರ್ಮಿಸುವ ಹಠ ಜಲಾನಯನ ದಂತಹ ಅತ್ಯಂತ ಭ್ರಷ್ಟರಿರುವ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳದ್ದು. ಆದರೂ ನೀರು ಕೊಡಿ ಅಂತ ಜನ ಪ್ರತಿಭಟನೆ ಮಾಡುತ್ತಾರೆ. ಈ ನೀರಿನ ಯೋಜನೆಯಲ್ಲಿ ಆಗುವ ಅವ್ಯವಹಾರಗಳದ್ದೇ ದೊಡ್ಡ ಕಥೆ.ಸಮುದ್ರದ ನೀರನ್ನು ಶುದ್ಧೀಕರಿಸಿ, ಕುಡಿಯಲು ಉಪಯೋಗಿಸುವ ತಂತ್ರಜ್ಞಾನ ನಮ್ಮಲ್ಲಿದ್ದರೂ ಅದನ್ನು ಹೆಚ್ಚು ಬಳಸುವ, ಆ ಮೂಲಕ ನೀರಿನ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ನಡೆಯುತ್ತಿಲ್ಲ.ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ವಿಷ ಪೂರಿತ ನೀರನ್ನು ನದಿಗಳಿಗೆ, ಸಮುದ್ರಕ್ಕೆ ಶುದ್ದೀಕರಿಸಿ ಬಿಡುವ ತಾಂತ್ರಿಕತೆ ಇದ್ದರೂ ಹೆಚ್ಚು ಖರ್ಚು ಎಂಬ ನೆಪದಲ್ಲಿ ಆ ಕಾರ್‍ಯವನ್ನು ಕೈಗಾರಿಕೆಗಳೂ ಮಾಡುತ್ತಿಲ್ಲ, ಮಾಡಿಸಬೇಕಾದ ಇಲಾಖಾ ಅಧಿಕಾರಿಗಳೂ ಅಮೇಧ್ಯ ತಿಂದು ಸುಮ್ಮನಾಗುತ್ತಾರೆ. ಉದಾಹರಣೆಗೆ ಸುರತ್ಕಲ್‌ನ ಎಂಆರ್‌ಪಿಎಲ್, ಬಿಎಸ್‌ಎಫ್‌ಗಳು ಸಮುದ್ರಕ್ಕೆ ನೇರ ಕೊಳಕು ನೀರನ್ನು ಕಾನೂನು ಬಾಹಿರವಾಗಿ ಬಿಡುತ್ತಿದ್ದರೂ ಯಾವ ಜನಪ್ರತಿ ನಿಧಿಯೂ, ಅಧಿಕಾರಿಯೂ ಧ್ವನಿ ಎತ್ತುತ್ತಿಲ್ಲ. ಮೀನು ಗಾರರು ಮಾತ್ರ ತಮ್ಮ ಉದ್ಯೋಗವನ್ನು ಕಳೆದು ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೀನುಗಳ ಮೇಲೆ ವಿಷ ಪರಿಣಾಮ ಬೀರಿ ತಿನ್ನುವವರ ಮೇಲೂ ಪ್ರಭಾವ ಬೀರಿದರೂ ಉದ್ಯಮಿಗಳ ದುಡ್ಡಿನ ಮುಂದೆ ಯಾರ ಧ್ವನಿಯೂ ಕೇಳಿಸದು ಅಲ್ಲವೇ?

6 comments:

shivu.k said...

ಸರ್,

ವಿಶ್ವ ಪರಿಸರ ದಿನಾಚರಣೆ ದಿನದ ಹಿನ್ನೆಲೆಯಲ್ಲಿ ಒಂದು ಅರ್ಥಪೂರ್ಣ ಲೇಖನ.

ಶಿವು.ಕೆ

ಸಾಗರದಾಚೆಯ ಇಂಚರ said...

ಪರಿಸರ ದಿನಾಚರಣೆಗೆ ಒಂದು ಉತ್ತಮ ಬರಹ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ

ಪ್ರಮೋದ ನಾಯಕ said...

ಒಳ್ಳೆಯ ಬರಹ.. ಗಾಳಿಯಂತ್ರಗಳಿಗೆ ಸರಾಸರಿ 5 ಕಿ.ಮೀ. ಪ್ರತಿ ಗಂಟೆ ಗಾಳಿ ಬೇಕಂತೆ..ಐ.ಐ.ಎಸ್ ಸಿ ವಿಜ್ಞಾನಿಗಳು ಮಾಡಿದ ಅಧ್ಯಯನದಂತೆ ಕರ್ನಾಟಕದ ಕೆಲ ಕರಾವಳಿ ಪ್ರದೇಶದಲ್ಲಿ ವರ್ಷಪೂರ್ತಿ ಬೇಕಾದರೆ ಗಾಳಿಯಂತ್ರ ಬಳಸಬಹುದೆಂದು ತಿಳಿದುಬಂದಿದೆ. ಅಲ್ಲದೆ ಅಷ್ಟೇನೂ ಕೈಗಾರಿಕೆಗಳನ್ನು ಹೊಂದಿರದ ಉತ್ತರಕನ್ನಡ ಜಿಲ್ಲೆಯ ಶೇಕಡಾ 33ರಷ್ಟು ಶಕ್ತಿ ಬೇಡಿಕೆಯನ್ನು ಸೌರ ಶಕ್ತಿಯನ್ನು ಒಂದನ್ನೇ ಬಳಸಿ ಪೂರೈಸಬಹುದಾಗಿದೆ ಎಂದೂ ಕೂಡ ವಿಜ್ಞಾನಿಗಳು ಹೇಳಿದ್ದಾರೆ. ಆದ್ದರಿಂದ ಸರಕಾರ ಯೋಜನೆಗಳನ್ನು ತಯಾರಿಸುವಾಗ ಸಂಬಂಧಪಟ್ಟ ಕ್ಷೇತ್ರಗಳ ತಂತ್ರಜ್ಞರ ಅಭಿಪ್ರಾಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

ಮಿಥುನ ಕೊಡೆತ್ತೂರು said...

ಸ್ನೇಹಿತರೆ
ನಿಮ್ಮ ಪ್ರತಿಕ್ರಿಯೆಗೆ ನಮೋ ನಮಃ

ಮಲ್ಲಿಕಾರ್ಜುನ.ಡಿ.ಜಿ. said...

ಮಿಥುನ ಅವರೆ,
unconventional sources ಬಗ್ಗೆ ನಮ್ಮವರು ಏಕೆ ಗಮನಹರಿಸುತ್ತಿಲ್ಲವೂ ಅರ್ಥವೇ ಆಗುತ್ತಿಲ್ಲ. ನಿಮ್ಮ ಲೇಖನ ಅರ್ಥಪೂರ್ಣವಾಗಿದೆ.

ವಿನಾಯಕ ಭಟ್ಟ said...

ಹೊಸದಾಗಿ ಮದುವೆಯಾಗಿದ್ದರೂ, ಎಲ್ಲ ಪ್ರೀತಿಯನ್ನೂ ಹೆಂಡತಿಗೇ ಕೊಡದೆ ಪರಿಸರದ ಬಗ್ಗೂ ಸ್ವಲ್ಪ ಪ್ರೀತಿ ಇರಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ!!!!