Saturday, June 27, 2009

ಕಡಲ ದಡದಲ್ಲಿ ಮುಂದುವರಿದ ನಡಿಗೆ










ಪಡುಬಿದ್ರೆ ದಾಟಿ ಉಚ್ಚಿಲದ ಬಳಿ ಕಡಲಿನಿಂದ ನೀರು ಕೊಂಡೊಯ್ದು, ಬಳಿಕ ವಾಪಾಸು ವಿಷಕಾರಿ ತ್ಯಾಜ್ಯವನ್ನು ಕಡಲಿಗೇ ಬಿಡುವ ನಾಗಾರ್ಜುನ ಕಂಪನಿಯವರ ಪೈಪ್ ಲೈನ್ ಕಾಮಗಾರಿ ಭರದಿಂದ ಸಾಗಿದೆ. ನೋಡುವ ಕರ್ಮ, ದುರಂತ ನಮ್ಮದು!



ಕಡಲಿನಲ್ಲಿ ಬಂಡೆಗಳ ರಾಶಿ, ತೆರೆಗಳು ಓಡಿ ಬಂದು, ಬಂಡೆಗೆ ಬಡಿದು ಹಾರಿ ಸಂಭ್ರಮಿಸುವುದನ್ನು ನೊಡುವ ಕಣ್ಣುಗಳ ನಮ್ಮವು!

Thursday, June 25, 2009

ಕಡಲ ದಡದಲ್ಲಿ ನಡಿಗೆ

ನಾವು ಒಂದಿಷ್ಟು ಗೆಳೆಯರು ಹೆಜಮಾಡಿಯಿಂದ ಕಾಪು ತನಕ ಹದಿನೈದು ಕಿ.ಮೀ.ಗಳಷ್ಟು ದೂರ ಕಡಲ ತೀರದಲ್ಲೇ ನಡೆದುಕೊಂಡು ಹೋದೆವು. ಅಮೇರಿಕಾದಿಂದ ಗೆಳೆಯರಾದ ಗಿಲ್ಬರ್ಟ್ ಡಿಸೋಜ ಪ್ರೀತಿಯಿಂದ ಕಳುಹಿಸಿದ ಕೆಮರಾದಿಂದ ಕ್ಲಿಕ್ಕಿಸಿದ ಬೀಚ್ ನಡಿಗೆಯ ಒಂದಿಷ್ಟು ಚಿತ್ರಗಳು ನಿಮಗಾಗಿ.
ನಮ್ಮ ಆರಂಭವಾದದ್ದು ಹೀಗೆ.
ಬೀಚ್ ಪಕ್ಕದಲ್ಲೊಂದು ಹೊಳೆ. ಕಾಮಿನಿ ಅಂತ. ಕಡಲ ಸೇರುವ ತವಕದಲ್ಲಿತ್ತು. ಅಲ್ಲೇ ದೋಣಿಯೊಂದಕ್ಕೆ ರಜೆ ಇತ್ತಾದರಿಂದ ನನ್ನ ಕೆಮರಾ ಕಣ್ಣಿಗೆ ಸಿಕ್ಕಿ ಬಿತ್ತು.
ಅದೇ ಹೊಳೆಯಲ್ಲಿ ಒಬ್ಬರು ಬಲೆ ಬೀಸಿ ಮೀನು ಹಿಡಿಯುತ್ತಿದ್ದರು.
ನೋಡಿ, ಆ ಕಡೆಯ ಕಡಲ ತೆರೆ ಈ ಕಡೆಯ ಹೊಳೆಯ ನೀರು ಒಂದಾಗುತ್ತಿದೆ. ಮಳೆ ಜೋರು ಬಂದರೆ ಬೀಚ್ ನಡಿಗೆ ಬಂದ್!
ಮಳೆ ಇಲ್ಲದಿದ್ದರೂ ಕಡಲ ಅಬ್ಬರಕ್ಕೇನೂ ಅಡ್ಡಿಯಿಲ್ಲ. ಒಂದರ ಹಿಂದೊಂದು ಎಂದು ತೆರೆಗಳು ಬರುತ್ತಲೇ ಇರುತ್ತವೆ. ಅವು ಸೋಲುವುದಿಲ್ಲ. ಮತ್ತೆ ಎದ್ದು ಬಂದು ದಡಕ್ಕೆ ಅಪ್ಪಳಿಸುತ್ತವೆ.
ಸಮುದ್ರ ಕಿನಾರೆಯಲ್ಲಿ ನಮ್ಮದು ಸಾವಿರ ಸಾವಿರ ಹೆಜ್ಜೆಗಳ ಪಯಣ! ನೋಡಿದಷ್ಟೂ ಮುಗಿದು ಹೋಗದ ಕಡಲರಾಶಿಯ ಪಕ್ಕದಲ್ಲಿ ನಾವೆಷ್ಟೆಂದರೂ ಅಷ್ಟೆ.
ಮನೆಯಲ್ಲಿ ಭೂತ ಪ್ರೇತ ದೈವಗಳ ಉಪಟಳವಿದ್ದಾಗ ಅವನ್ನು ಮಣಿಮಂಚದ ಸಮೇತ ಸಮುದ್ರಕ್ಕೆ ಬಿಸಾಡಿ ಉಚ್ಛಾಟಿಸುವ ನಂಬಿಕೆ ತುಳುನಾಡ ಕರಾವಳಿಯಲ್ಲಿದೆ. ಇದು ಹಾಗೆ ಬಿಟ್ಟು ಹೋದ ಅನಾಥ ಭೂತದ ಮಂಚ. ಇಂತಹ ನೂರಾರು ಮರದ ಆಸನ, ಮಂಚಗಳು ಕಡಲ ತಡಿಯಲ್ಲಿ ಕಾಣ ಸಿಕ್ಕವು.
ಬಾಟಲಿಗಂಟಿದ ಜೀವಂತ ಚಿಪ್ಪು ಪ್ರಾಣಿಯ ರಾಶಿ.







ಬೀಚ್ನಲ್ಲಿ ಬಾಟಲಿ, ಪ್ಲಾಸ್ಟಿಕ್, ಬಲ್ಬ್ ಮುಂತಾದ ವಸ್ತುಗಳು ರಾಶಿರಾಶಿ ಸಿಗುತ್ತಲೇ ಹೋಗುತ್ತವೆ.





ನಿಂತ ದೋಣಿಯಲ್ಲಿ ಕೂತು ಕೊಂಚ ವಿಶ್ರಾಂತಿ ಪಡೆದ ನಮಗೆ ಪ್ರಕ್ರತಿ ಎಂಬ ಖಾಸಗಿ ರೆಸಾರ್ಟ್ ನೋಡುವ ಅವಕಾಶವೂ ಸಿಕ್ಕಿತು.



ಗೆಳೆಯ ಯಶವಂತ ವಿಶ್ರಾಂತಿಗೆಂದು ಸುಮ್ಮನೆ ಕೂತು ಸಮುದ್ರದ ಫೊಟೋ ತೆಗೆಯುತ್ತಿದ್ದ. ಅದನ್ನು ನೋಡುತ್ತಿದ್ದ ನಾಯಿಯೊಂದು ಕೆಮರಾ ಮುಂದೆ ಬಂದು ನಿಂತು ನಗುತ್ತ ಫೋಸು ಕೊಟ್ಟದ್ದನ್ನು ನನ್ನ ಕೆಮರಾ ಕಂಡಿತು!
ಇನ್ನಷ್ಟು ನಡಿಗೆಯನ್ನು ಮುಂದಿನ ಕಂತಿನಲ್ಲಿ ಕೊಡುತ್ತೇನೆ.

Thursday, June 4, 2009

ನೀರು ಮತ್ತು ವಿದ್ಯುತ್


ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ನಾಲ್ಕು ಸಾವಿರ ಕೋಟಿ ರೂಪಾಯಿಯ ಯೋಜನೆಗೆ ಮುಂದಾಗುವ ಸರಕಾರಗಳು ಇಪ್ಪತ್ತು ಕೋಟಿ ಕೊಡಿ, ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸಿ ಕೊಡುತ್ತೇನೆ ಎಂದು ಕೇಳುವ ಮಲ್ಪೆಯ ವಿಜಯ್‌ರ ಮಾತಿಗೆ ಮನ್ನಣೆ ಕೊಡುವುದೇ ಇಲ್ಲ.ತಮಿಳುನಾಡಿನಲ್ಲಿ ಅನೇಕ ಕಡೆ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ದೊಡ್ಡ ದೊಡ್ಡ ಸಾವಿರಾರು ಫ್ಯಾನುಗಳನ್ನು ಕಾಣಬಹುದು. ಆದರೆ ನಮ್ಮ ಕರಾವಳಿಯಲ್ಲಿ ಯಾಕೆ ಇನ್ನೂ ಅಳವಡಿಸದೆ, ಪರಿಸರ ನಾಶ ಮಾಡುವ ಕಲ್ಲದ್ದಲು ಆಧಾರಿತವಾದ ಯೋಜನೆಗೇ ಮಣೆ ಹಾಕುತ್ತಿದ್ದಾರೆನ್ನುವುದೇ ಸೋಜಿಗ. ನಾಲ್ಕು ಸಾವಿರ ಕೋಟಿಯಲ್ಲಿ ಅನೇಕರಿಗೆ ಪಾಲು ಇದೆ ಅಂತ ಜನ ಸಾಮಾನ್ಯರೂ ಸುಲಭವಾಗಿ ತರ್ಕಿಸಬಹುದು. ನೀರಿನಿಂದ ವಿದ್ಯುತ್ ಉತ್ಪಾದಿಸುವ ನಮ್ಮ ತಂತ್ರಜ್ಞಾನ ಹೆಮ್ಮೆಯದ್ದೇ.ಆದರೆ ವಿದ್ಯುತ್ ಸೋರಿಕೆ, ಕಳ್ಳತನದ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯಲ್ಲಿ ಅಥವಾ ಯೋಜನೆಗಳ ಅನುಷ್ಟಾನದಲ್ಲಿ ನಮ್ಮ ನಡುವಿನ ಹೆಚ್ಚಿನ ಜನ ಪ್ರತಿನಿಧಿಗಳಿಗೆ ವಿಶೇಷ ಆಸಕ್ತಿ ಅಥವಾ ಮುತುವರ್ಜಿ ಇರುವುದಿಲ್ಲ. ಯೋಜನೆಗಳ ಪ್ರಕಟನೆ ಆಗುವಾ ಗಲೂ ಕೋಟಿ ಲೆಕ್ಕದಲ್ಲೇ ಹೇಳಿಕೆ ಕೊಡುವ ಮಂತ್ರಿಗಳು, ಶಾಸಕರು ಯೋಜನೆಗಳ ಕಾಮಗಾರಿ ಎಷ್ಟರಮಟ್ಟಿಗೆ ಸಮರ್ಪಕವಾಗಿ ಆಗಿವೆ ಎಂಬುದನ್ನು ಚಿಂತಿಸುವುದೇ ಇಲ್ಲ.ವಾರಾಹಿ ಯೋಜನೆ ನೂರಾರು ಕೋಟಿಗಳ ಖರ್ಚಿನ ಬಳಿಕವೂ ಪೂರ್ತಿಗೊಂಡಿಲ್ಲ. ಅದರ ಬಳಕೆಯೂ ಆರಂಭವಾಗಿಲ್ಲ. ಆದರೆ ಇಂಜಿನಿ ಯರು, ಗುತ್ತಿಗೆದಾರರು ದುಂಡಗಾಗುತ್ತಲೇ ಹೋದರು. ಅನೇಕರು ನಿವೃತ್ತರಾದರು!ಈಗ ನದಿ ತಿರುಗಿಸುತ್ತೇವೆ ಅಂತ ಕೆಲವರು ಹೊರಟಿದ್ದಾರೆ! ಪಕೃತಿ ಸಹಜವಾಗಿ ಸಮುದ್ರದೆಡೆಗೆ ಹರಿಯುವ ನದಿಯನ್ನು ಉಲ್ಟಾ ತಿರುಗಿಸುವುದೆಂದರೆ ಒಂದರ್ಥದಲ್ಲಿ ನದಿಯನ್ನೇ ಇಲ್ಲವಾಗಿಸುವ ಪ್ರಯತ್ನವಲ್ಲವೆ?ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಹಗಳು ಪ್ರಕಟವಾದರೂ ಹೆಚ್ಚಿನ ಜನ ಮಳೆಗಾಲದಲ್ಲಿ ನೀರು ಇಂಗಿಸುವ ಪುಟ್ಟ ಪ್ರಯತ್ನವನ್ನೂ ಮಾಡುತ್ತಿಲ್ಲ. ಕೆರೆಗಳ ಹೂಳೆತ್ತುವಿಕೆ, ನಿರ್ಮಾಣಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸದೆ, ಬೇಗ ಒಣಗಿಹೋಗುವ ಕೊಳವೆ ಬಾವಿಗಳನ್ನೇ ನಿರ್ಮಿಸುವ ಹಠ ಜಲಾನಯನ ದಂತಹ ಅತ್ಯಂತ ಭ್ರಷ್ಟರಿರುವ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳದ್ದು. ಆದರೂ ನೀರು ಕೊಡಿ ಅಂತ ಜನ ಪ್ರತಿಭಟನೆ ಮಾಡುತ್ತಾರೆ. ಈ ನೀರಿನ ಯೋಜನೆಯಲ್ಲಿ ಆಗುವ ಅವ್ಯವಹಾರಗಳದ್ದೇ ದೊಡ್ಡ ಕಥೆ.ಸಮುದ್ರದ ನೀರನ್ನು ಶುದ್ಧೀಕರಿಸಿ, ಕುಡಿಯಲು ಉಪಯೋಗಿಸುವ ತಂತ್ರಜ್ಞಾನ ನಮ್ಮಲ್ಲಿದ್ದರೂ ಅದನ್ನು ಹೆಚ್ಚು ಬಳಸುವ, ಆ ಮೂಲಕ ನೀರಿನ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ನಡೆಯುತ್ತಿಲ್ಲ.ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ವಿಷ ಪೂರಿತ ನೀರನ್ನು ನದಿಗಳಿಗೆ, ಸಮುದ್ರಕ್ಕೆ ಶುದ್ದೀಕರಿಸಿ ಬಿಡುವ ತಾಂತ್ರಿಕತೆ ಇದ್ದರೂ ಹೆಚ್ಚು ಖರ್ಚು ಎಂಬ ನೆಪದಲ್ಲಿ ಆ ಕಾರ್‍ಯವನ್ನು ಕೈಗಾರಿಕೆಗಳೂ ಮಾಡುತ್ತಿಲ್ಲ, ಮಾಡಿಸಬೇಕಾದ ಇಲಾಖಾ ಅಧಿಕಾರಿಗಳೂ ಅಮೇಧ್ಯ ತಿಂದು ಸುಮ್ಮನಾಗುತ್ತಾರೆ. ಉದಾಹರಣೆಗೆ ಸುರತ್ಕಲ್‌ನ ಎಂಆರ್‌ಪಿಎಲ್, ಬಿಎಸ್‌ಎಫ್‌ಗಳು ಸಮುದ್ರಕ್ಕೆ ನೇರ ಕೊಳಕು ನೀರನ್ನು ಕಾನೂನು ಬಾಹಿರವಾಗಿ ಬಿಡುತ್ತಿದ್ದರೂ ಯಾವ ಜನಪ್ರತಿ ನಿಧಿಯೂ, ಅಧಿಕಾರಿಯೂ ಧ್ವನಿ ಎತ್ತುತ್ತಿಲ್ಲ. ಮೀನು ಗಾರರು ಮಾತ್ರ ತಮ್ಮ ಉದ್ಯೋಗವನ್ನು ಕಳೆದು ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೀನುಗಳ ಮೇಲೆ ವಿಷ ಪರಿಣಾಮ ಬೀರಿ ತಿನ್ನುವವರ ಮೇಲೂ ಪ್ರಭಾವ ಬೀರಿದರೂ ಉದ್ಯಮಿಗಳ ದುಡ್ಡಿನ ಮುಂದೆ ಯಾರ ಧ್ವನಿಯೂ ಕೇಳಿಸದು ಅಲ್ಲವೇ?